ಬೆಂಗಳೂರು: ಸಿಎಂ ಬಿಎಸ್ವೈ ನಿವಾಸದಲ್ಲಿ ಸಚಿವರಾದ ಕೆ.ಸುಧಾಕರ್ ಮತ್ತು ಶ್ರೀರಾಮುಲು ಮಧ್ಯೆ ನಡೆದ ಸಂಧಾನ ಸಭೆ ಬಳಿಕ ಇಬ್ಬರು ಸಚಿವರು ಸುದ್ದಿಗೋಷ್ಠಿ ನಡೆಸಿದರು.
ಸಚಿವ ಶ್ರೀರಾಮುಲು ಖಾತೆ ಬದಲಾವಣೆ ಮಾಡಿದ ವಿಚಾರವಾಗಿ ಒಳ್ಳೆಯ ಕೆಲಸ ಮಾಡಲು ಸಿಎಂ ಸಲಹೆ ಕೊಟ್ಟಿದ್ದಾರೆ. ನಮ್ಮಿಬ್ಬರನ್ನೂ ಕರೆಸಿ ಸಿಎಂ ಬಿಎಸ್ವೈ ಸೂಚನೆ ಕೊಟ್ಟಿದ್ದಾರೆ ಎಂದು ಶ್ರೀರಾಮುಲು ಹೇಳಿದರು. ಸಿಎಂ ಬಿಎಸ್ವೈ ಬಳಿ ಸಮಾಜ ಕಲ್ಯಾಣ ಖಾತೆ ಕೇಳಿದ್ದೆ.
ಸಿಎಂ ನನಗೆ ಈಗ ಸಮಾಜ ಕಲ್ಯಾಣ ಖಾತೆ ಕೊಟ್ಟಿದ್ದಾರೆ. ನಾನು ಸಂತೋಷದಿಂದ ಈ ಖಾತೆ ವಹಿಸಿಕೊಂಡಿದ್ದೇನೆ. ನನ್ನ ಸ್ನೇಹಿತರಾದ ಸುಧಾಕರ್ ವೈದ್ಯರಾಗಿರುವ ಹಿನ್ನೆಲೆ ಸಿಎಂ ಅವರಿಗೆ ಆರೋಗ್ಯ ಇಲಾಖೆಯನ್ನು ವಹಿಸಿದ್ದಾರೆ. ವೈದ್ಯಕೀಯ ಶಿಕ್ಷಣ ಜೊತೆ ಆರೋಗ್ಯ ಇಲಾಖೆ ನೀಡಿದ್ದಾರೆ ಎಂದು ಶ್ರೀರಾಮುಲು ಹೇಳದರು.
‘ಕೊರೊನಾ ನಿಭಾಯಿಸಲು ನಾನು ವಿಫಲನಾಗಿದ್ದೇನೆ ಎಂದಲ್ಲ’
ಈ ಹಿಂದೆ ಕೆ.ಸುಧಾಕರ್ಗೆ ಬೆಂಗಳೂರು ಉಸ್ತುವಾರಿ ನೀಡಿದ್ದರು. ಸುಧಾಕರ್ ಕೊರೊನಾ ವಿಚಾರದಲ್ಲಿ ಬೆಂಗಳೂರು ಉಸ್ತುವಾರಿಯಾಗಿದ್ರು. ನಾನಿದ್ದಾಗ ಬೆಂಗಳೂರಲ್ಲಿ ಕೊರೊನಾ ಕೇಸ್ ಸಾವಿರ ಇತ್ತು. ಸುಧಾಕರ್ ಪಡೆದ ಬಳಿಕ ಕೊರೊನಾ ಕೇಸ್ 5,000ಕ್ಕೇರಿತ್ತು. ಹೀಗೆಂದು ನಾನು ನಿಭಾಯಿಸಲು ವಿಫಲನಾಗಿದ್ದೇನೆ ಎಂದಲ್ಲ ಎಂದು ಶ್ರೀರಾಮುಲು ಪರೋಕ್ಷವಾಗಿ ಸುಧಾಕರ್ಗೆ ಟಾಂಗ್ ಕೊಟ್ಟರು.
‘ಜಿಲ್ಲಾ ಹಂತದಲ್ಲಿ ಸಮನ್ವಯತೆಯ ಕೊರತೆ ಇತ್ತು’
ಈ ನಡುವೆ ಅಲ್ಲೇ ನಿಂತಿದ್ದ ಸಚಿವ ಡಾ.ಕೆ.ಸುಧಾಕರ್ ಶ್ರೀರಾಮುಲು ಅಣ್ಣ ಹಿರಿಯರು, ಒಳ್ಳೆಯ ನಾಯಕರು. ಒಂದು ತಿಂಗಳ ಹಿಂದೆ ಸಂಪುಟ ವಿಸ್ತರಣೆ ಆಗಬೇಕಿತ್ತು. ಬಿಹಾರ ಚುನಾವಣೆ ಕಾರಣದಿಂದ ಮುಂದೂಡುವ ಸ್ಥಿತಿ ಎದುರಾಯ್ತು. ಸಂಪುಟ ಪುನಾರಚನೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಬಿಎಸ್ವೈ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ ಎಂದು ಹೇಳಿದರು.
ಕೆಳ ಹಂತದಲ್ಲಿ ಮತ್ತು ಜಿಲ್ಲಾ ಹಂತದಲ್ಲಿ ಸಮನ್ವಯತೆಯ ಕೊರತೆ ಇತ್ತು. ಹಾಗಾಗಿ, ತಾಂತ್ರಿಕತೆ ಮತ್ತು ಸಮನ್ವಯತೆ ಕಾಪಾಡಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಯಿತು. ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದೇವೆ. ಯಾರು ಹೆಚ್ಚು, ಯಾರು ಕಡಿಮೆ ಎಂಬ ಪ್ರಶ್ನೆಯೇ ಇಲ್ಲ. ಶ್ರೀರಾಮುಲು ಪ್ರಭಾವಿ ಮತ್ತು ಬಲಿಷ್ಠ ಸಮಾಜ ಕಲ್ಯಾಣ ಇಲಾಖೆ ವಹಿಸಿದ್ದಾರೆ. ಇದು ಬಿ.ಶ್ರೀರಾಮುಲುರಿಗೆ ದೊಡ್ಡ ಇಲಾಖೆ. ರಾಮುಲುಗೆ ಡಿ-ಪ್ರಮೋಟ್ ಆಗಿಲ್ಲ, ಪ್ರಮೋಟ್ ಆಗಿದ್ದಾರೆ ಎಂದು ಸುಧಾಕರ್ ಮಾತಿನಲ್ಲೇ ಶ್ರೀರಾಮುಲುಗೆ ನಯವಾಗಿ ತಿರುಗೇಟು ನೀಡಿದರು.