ನೆಲಮಂಗಲ: ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ವಿರುದ್ಧ ಪದೇಪದೆ ಭೂ ಕಬಳಿಕೆ ಆರೋಪ ಕೇಳಿಬರ್ತಿದೆ. 2007ರಲ್ಲಿ ಬಾಲಕೃಷ್ಣ ಅಧ್ಯಕ್ಷರಾಗಿದ್ದ ಜನತಾ ಎಜುಕೇಷನ್ ಸೊಸೈಟಿ ಹೆಸರಲ್ಲಿ ಕೋಟಿ ಕೋಟಿ ಬೆಲೆಬಾಳುವ ಗೋಮಾಳವನ್ನು ಹರಾಜಲ್ಲಿ ಖರೀದಿಸಿದ್ದು, ನಮಗೆ ಅನ್ಯಾಯ ಆಗಿದೆ ನ್ಯಾಯ ಒದಗಿಸಿ ಎಂದು ರೈತರು ಪೋಲಿಸರ ಮೊರೆ ಹೋಗಿದ್ದಾರೆ.
ಬೆಂಗಳೂರಲ್ಲಿ ಭೂಮಿಯ ಬೆಲೆ ಗಗನ ಕುಸುಮವಾಗಿದೆ. ಇಂತಹ ಜಮೀನನ್ನು ಸ್ವಾಧೀನದಲ್ಲಿರುವ ರೈತರಿಗೆ ತಿಳಿಯದೇ ಹರಾಜು ಪ್ರಕ್ರಿಯಯಲ್ಲಿ ಅಕ್ರಮವಾಗಿ ಜನತಾ ಎಜುಕೇಷನ್ ಸೊಸೈಟಿಯವರು ಖರೀದಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಸುತ್ತಿ ಬಳಸಿ ಇದು ಮಾಗಡಿಯ ಮಾಜಿ ಶಾಸಕರ ಕೊರಳಿಗೆ ಸುತ್ತಿಕೊಳ್ಳುತ್ತಿದೆ.
ಭೂ ಸ್ವಾಧೀನಕ್ಕೆ ಹೋದಾಗ ನೂರಾರು ಅಡ್ಡಿ!
ಅಂದಹಾಗೆ ಬೆಂಗಳೂರು ಉತ್ತರ ತಾಲೂಕು ಲಕ್ಷ್ಮೀಪುರ ಸರ್ವೆ ನಂಬರ್ 52ರ 6 ಎಕರೆ 17 ಕುಂಟೆ ಜಮೀನು ವಿವಾದಕ್ಕೆ ಕಾರಣವಾಗಿದೆ. 2007ರಲ್ಲಿ ಹೆಚ್ಡಿಕೆ ಸಿಎಂ ಆಗಿದ್ದಾಗ, ಸರ್ಕಾರಿ ಗೋಮಾಳದ ಹರಾಜು ಪ್ರಕ್ರಿಯೆಯಲ್ಲಿ ಪ್ರಭಾವ ಬಳಿಸಿ ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ಅಧ್ಯಕ್ಷರಾಗಿರುವ ಜನತಾ ಎಜುಕೇಷನ್ ಸೊಸೈಟಿಗೆ 2 ಕೋಟಿಗೆ ಹೆಚ್ಚಿನ ಬಿಡ್ ಮಾಡಿ ಜಮೀನು ಖರೀದಿ ಮಾಡಲಾಗಿತ್ತು. ಈವರೆಗೆ ಹರಾಜಾಗಿದ್ದ ಭೂಮಿ ಸ್ವಾಧೀನಕ್ಕೆ ಬಂದಿರಲಿಲ್ಲ. ನ್ಯಾಯಾಲಯದ ಆದೇಶದ ಪ್ರಕಾರ ಸ್ವಾಧೀನಕ್ಕೆ ಮುಂದಾದ ವೇಳೆ ರೈತರು ಸ್ವಾಧೀನ ಪ್ರಕ್ರಿಯೆ ತಡೆದಿದ್ದಾರೆ.
ಸುಮಾರು 60 ವರ್ಷದಿಂದ ಸ್ವಾಧೀನದಲ್ಲಿದ್ದ ಹನುಮನರಸಯ್ಯ ಮತ್ತು ಇತರೆ ನಾಲ್ವರು ರೈತ ಕುಟುಂಬಗಳಿಗೆ ಇದರ ಮಾಹಿತಿ ಇರಲಿಲ್ಲ. ಏಕಾಏಕಿ ಜಮೀನು ಬೇರೆಯವರ ಪಾಲಾಗುತ್ತಿದೆ ಅಂತಾ ಗಾಬರಿಗೊಂಡು ಕೋರ್ಟ್ನಲ್ಲಿ ದಾವೆ ಹೂಡಿದ್ದು, ಆದ್ರೆ ಈಗ ಮತ್ತೆ ಹೈ ಕೋರ್ಟ್ನಲ್ಲಿ ತಡೆಯಾಜ್ಞೆಗೆ ಅರ್ಜಿ ಸಲ್ಲಿಸಿದ್ದು ಕೋವಿಡ್ ಕಾರಣ ಅರ್ಜಿ ವಿಲೇವಾರಿ ತಡವಾಗಿದೆ. ಪ್ರಭಾವಿಗಳು ಅಕ್ರಮವಾಗಿ ಜಮೀನು ಖರೀದಿಸಿದ್ದಾರೆ ಎಂದು ಕಿಡಿ ಕಾರುತ್ತಿದ್ದಾರೆ.
ಜನತಾ ಎಜುಕೇಷನ್ ಸೊಸೈಟಿ ಮಾದನಾಯಕನಹಳ್ಳಿ ಪೊಲೀಸರ ರಕ್ಷಣೆ ಪಡೆದು ಜಮೀನನ್ನು ತನ್ನ ವಶಕ್ಕೆ ಪಡೆದಿದೆ. ಮತ್ತೊಂದ್ಕಡೆ ರೈತರು ನಮಗೆ ಈ ವಿಚಾರದಲ್ಲಿ ಅನ್ಯಾಯ ಆಗಿದೆ, ದಯವಿಟ್ಟು ನ್ಯಾಯ ಕೊಡಿಸಿ ಅಂತಾ ಅಳಲು ತೋಡಿಕೊಳ್ಳುತ್ತಿದ್ದಾರೆ.