ಬೆಂಗಳೂರು: ಅವೈಜ್ಞಾನಿಕ ರೋಡ್ ಹಂಪ್ಗಳು ಹಾಕಿರುವ ವಿಚಾರಕ್ಕೆ ಸಂಬಂಧಿಸಿ ಸದನದಲ್ಲಿ ಶಾಸಕ ರಮೇಶ್ ಕುಮಾರ್ ಅಸಮಾಧಾನ ಹೊರ ಹಾಕಿದ್ದಾರೆ. ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಹೋಗುವುದಿಲ್ಲ. ಒಬ್ಬ ಜೆಇ, ಇಇ ಯಾರೂ ಸ್ಥಳ ಪರಿಶೀಲನೆ ಮಾಡಲ್ಲ. ಬೇಕಾಬಿಟ್ಟಿಯಾಗಿ ರೋಡ್ ಹಂಪ್ಗಳನ್ನ ಹಾಕಿದ್ದಾರೆ. ಇದಕ್ಕೆಲ್ಲಾ ಯಾರು ಹೊಣೆ ಎಂದು ಇಂದು ನಡೆದ ಸದನದಲ್ಲಿ ರಮೇಶ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.
ಈ ವೇಳೆ ಮಾತನಾಡುತ್ತ ಅವರು, ಹಳ್ಳಿ ರಸ್ತೆಯಿಂದ ಮುಖ್ಯ ರಸ್ತೆಗೆ ಬರಬೇಕಾದ್ರೆ ಹಂಪ್ ಇರಲಿ. ಆದರೆ ಮುಖ್ಯ ರಸ್ತೆಯಲ್ಲಿ ಸ್ಪೀಡ್ ಹಂಪ್ಗಳನ್ನು ಹಾಕ್ತಾರೆ. ಬೇಜವಾಬ್ದಾರಿ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕು ಎಂದು ರಮೇಶ್ ಕುಮಾರ್ ಪ್ರಶ್ನೆ ಎತ್ತಿದ್ರು. ಇನ್ನು ಈ ವೇಳೆ ರಮೇಶ್ ಕುಮಾರ್ ಪ್ರಶ್ನೆಗೆ ಸ್ಪೀಕರ್ ಪ್ರತಿಕ್ರಿಯೆ ನೀಡಿದ್ರು.
ಎಲ್ಲಾ ಕಡೆ ಸಮಸ್ಯೆ ಇದೆ, ನಾನು ಕೂಡ ಹಂಪ್ ಸಮಸ್ಯೆ ಬಗ್ಗೆ ಕೆಲವು ಅಧಿಕಾರಿಗಳನ್ನು ಕೇಳಿದೆ. ಹಳ್ಳಿ ಜನ, ಶಾಸಕರು ಒತ್ತಾಯ ಮಾಡಿದ್ದಕ್ಕೆ ಹಾಕಿದ್ದೇವೆ ಅಂತಾ ಹೇಳಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದರೆಂರು ಸ್ಪೀಕರ್ ಕಾಗೇರಿ ಉತ್ತರಿಸಿದರು.
ಬಳಿಕ ಮತ್ತೆ ಪ್ರಶ್ನೆ ಮಾಡಿದ ಶಾಸಕ ರಮೇಶ್ ಕುಮಾರ್ ಯಾರೋ ಹೇಳಿದ ಮಾತು ಅಧಿಕಾರಿಗಳು ಏಕೆ ಕೇಳಬೇಕು? ಎಂದು ವಿಧಾನಸಭೆಯಲ್ಲಿ ಶಾಸಕ ರಮೇಶ್ ಕುಮಾರ್ ಮರುಪ್ರಶ್ನೆ ಮಾಡಿದ್ದಾರೆ. ನಾನು ನಾಲ್ಕು ಜನರ ತಲೆ ತೆಗೆಯಿರಿ ಅಂತೇನೆ ಕೇಳ್ತಾರಾ ಎಂದು ಅಧಿಕಾರಿಗಳ ಮೇಲೆ ರಮೇಶ್ ಕುಮಾರ್ ಗರಂ ಆಗಿದ್ದಾರೆ.
ರಸ್ತೆಯಲ್ಲಿ ಸರ್ಕಾರದ ಅನುಮತಿ ಇಲ್ಲದೇ ಹೇಗೆ ಸ್ಪೀಡ್ ಬ್ರೇಕ್ ಹಾಕ್ತಾರೆ?
ಇನ್ನು ರಮೇಶ್ ಕೋಪ ನೋಡಿ ಪ್ರತಿಕ್ರಿಯೆ ನೀಡಿದ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್, ಕೆಲವು ಕಡೆ ಸರ್ಕಾರ ಹಂಪ್ ಹಾಕೋದೇ ಇಲ್ಲ, ಕೆಲವು ಕಡೆಗಳಲ್ಲಿ ಊರಿನವರೇ ಗುತ್ತಿಗೆದಾರರ ಮೂಲಕ ಹಾಕಿಸಿಕೊಳ್ತಾರೆ. ಎಸ್ಪಿಗಳ, ಡಿಸಿಗಳ ಮೂಲಕ ವರದಿ ತರಿಸಿಕೊಳ್ತೇನೆ, ಎಲ್ಲರನ್ನೂ ಸಸ್ಪೆಂಡ್ ಮಾಡಿ ಅಂದ್ರೆ ಆಗುವ ಮಾತಲ್ಲ ಎಂದರು.
ಇದು ರಮೇಶ್ ಕುಮಾರ್ ಒಬ್ಬರ ಕ್ಷೇತ್ರದ ಸಮಸ್ಯೆ ಅಲ್ಲ, ಎಲ್ಲಾ ಕ್ಷೇತ್ರಗಳಲ್ಲಿ ಇರುವ ಸಮಸ್ಯೆ, ಈಗಾಗಲೇ ಸಚಿವರು ಎಸ್ಪಿ, ಡಿಸಿಗಳ ಮೂಲಕ ವರದಿ ತರಿಸಿಕೊಂಡು ಕ್ಲಿಯರ್ ಮಾಡ್ತೇವೆ ಎಂದಿದ್ದಾರೆ, ನಾವು ತಮ್ಮ ಪ್ರಭಾವ ಬಳಸಿ, ಅವೈಜ್ಞಾನಿಕ ಹಂಪ್ಗಳನ್ನು ತೆಗೆಸೋಣ ಎಂದು ಸ್ಪೀಕರ್ ಮಾತು ಮುಗಿಸಿದರು.