ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ಶಾಸಕ ಎ.ಎಸ್ ಪೊನ್ನಣ್ಣ ಅವರನ್ನ ನೇಮಕ ಮಾಡಿ, ಆದೇಶ ಮಾಡಲಾಗಿದೆ.

ಈ ಹಿಂದೆ ಪೊನ್ನಣ್ಣ ಅವರ ಹೆಸರನ್ನ ವಿಧಾನಸಭೆ ಉಪಾಧ್ಯಕ್ಷರ ಹುದ್ದೆಗೆ ಸೂಚಿಸಲಾಗಿತ್ತು. ಹೈಕಮಾಂಡ್ ನಿಂದ ಪ್ರಕಟವಾದ ಸಚಿವರ ಪಟ್ಟಿಯಲ್ಲಿ ಸ್ಪೀಕರ್, ಸಭಾಪತಿ, ಹಾಗೂ ಡೆಪ್ಯೂಟಿಗಳ ಹೆಸರು ಉಲ್ಲೇಖಿಸಲಾಗಿತ್ತು. ಆದರೆ ದಿಢೀರ್ ಹೆಸರು ಬದಲಾವಣೆ ಮಾಡಲಾಗಿದೆ.
ಎ.ಎಸ್ ಪೊನ್ನಣ್ಣ ಅವರು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾನೂನು ಸಲಹೆಗಾರರಾಗಿದ್ದರು. ಮುಡಾ ಹಗರಣ ಸೇರಿದಂತೆ ಹಲವು ಸಂದರ್ಭದಲ್ಲಿ ಕಾನೂನು ಸಮಸ್ಯೆಗಳು ಉದ್ಭವಿಸಿದಾಗ ಅಂದಿನ ಸಿಎಂ ಸಿದ್ದರಾಮಯ್ಯ ಹಾಗೂ ಸರ್ಕಾರವನ್ನ ಸಮರ್ಥನೆ ಮಾಡಿಕೊಂಡಿದ್ದರು. ಈ ಮೂಲಕ ಅವರು ಗಮನ ಸೆಳೆದಿದ್ದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳ ಅಧಿಕಾರ ಹಸ್ತಾಂತರ ಸಂದರ್ಭದಲ್ಲು ಪೊನ್ನಣ್ಣ ಅವರು ಸಿದ್ದರಾಮಯ್ಯ – ಡಿಕೆಶಿ ಹಾಗೂ ಹೈಕಮಾಂಡ್ ನಡುವಿನ ಕೊಂಡಿಯಾಗಿ ಕೆಲಸ ಮಾಡಿದ್ದರು.
ಮೂಲಗಳು ಹೇಳುವಂತೆ, ಪೊನ್ನಣ್ಣ ಅವರು ಡೆಪ್ಯೂಟಿ ಸ್ಪೀಕರ್ ಸ್ಥಾನದ ಆಕಾಂಕ್ಷಿ ಆಗಿರಲಿಲ್ಲ, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು ಎಂದು ಹೇಳಲಾಗಿದೆ. ಹೀಗಾಗಿ ಅವರಿಗೆ ಇದೀಗ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ. ಈ ಹುದ್ದೆಯಲ್ಲಿ ಸಂಪುಟ ಸ್ಥಾನಮಾನ ಸಿಗಲಿದೆ. ಇದೀಗ ಉಪ ಸಭಾಧ್ಯಕ್ಷರ ಹುದ್ದೆಗೆ ಯಾರನ್ನ ಆಯ್ಕೆ ಮಾಡಲಾಗುವುದು ಎಂಬುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಆರ್.ವಿ ದೇಶಪಾಂಡೆಗೂ ಸಂಪುಟ ದರ್ಜೆ ಸ್ಥಾನಮಾನ
ಇನ್ನೂ ಹಿರಿಯ ಶಾಸಕ ಆರ್.ವಿ ದೇಶಪಾಂಡೆ (RV Deshpande) ಅವರನ್ನ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಈ ಹುದ್ದೆಗೆ ಸಂಪುಟ ದರ್ಜೆಯ ಸಚಿವರ ಸ್ಥಾನ ಮಾನ ನೀಡಲಾಗಿದೆ.
Laxmi News 24×7