ಗೋಕಾಕ: ಈಚೆಗೆ ಕೊಲೆಯಾದ ನಗರದ ಸಗಟು ವ್ಯಾಪಾರಿ ಶವ ಗುರುವಾರ ರಾತ್ರಿ ಪತ್ತೆಯಾಗಿದೆ. ತಾಲ್ಲೂಕಿನ ಪಂಚನಾಯಕನ ಹಟ್ಟಿ ಗ್ರಾಮದ ಹೊರವಲಯದಲ್ಲಿ, ಮಾರ್ಕಂಡೇಯ ನದಿ ಕಾಲುವೆಯಲ್ಲಿ ಶವ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದೆ.
ನಗರದ ಹಿಲ್ ಗಾರ್ಡನ್ ರಸ್ತೆಯ ನಿವಾಸಿ ರಾಜು ಝಂವರ (53) ಅವರನ್ನು ಫೆ.10ರಂದು ಅಪಹರಿಸಿ ಕೊಲೆ ಮಾಡಲಾಗಿತ್ತು.
ಶವವನ್ನು ಗೋಕಾಕ ಫಾಲ್ಸ್ ಕಾಲುವೆಯಲ್ಲಿ ಎಸೆದಿದ್ದಾಗಿ ಆರೋಪಿಗಳು ಹೇಳಿಕೆ ನೀಡಿದ್ದರು. ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ ಸೇರಿ 350 ಮಂದಿಯ ತಂಡ ಶವಕ್ಕಾಗಿ ಹುಡುಕಾಟ ನಡೆಸಿತ್ತು. ಮಾರ್ಕಂಡೇಯ ನದಿಯ ಬಲದಂಡೆ ಉಪ-ಕಾಲುವೆಯುದ್ದಕ್ಕೂ ತಡಕಾಡಿದ್ದರು. ಈ ಕಾಲುವೆ ಹರಿದಿರುವ ಬಾಗಲಕೋಟೆ ಜಿಲ್ಲೆಯ ಹಲವು ಸ್ಥಳಗಳನ್ನೂ ಹುಡುಕಾಡಿದ್ದರು.
ಪಂಚನಾಯಕನ ಹಟ್ಟಿಯಲ್ಲಿ ರೈತರನ ಹೊಲಕ್ಕೆ ನೀರು ಹರಿಯುವುದು ಏಕಾಏಕಿ ಕಡಿಮೆಯಾಗಿತ್ತು. ಕಾಲುವೆಯಲ್ಲಿ ಯಾವುದೋ ವಸ್ತು ಅಡ್ಡಸಿಕ್ಕಿಕೊಂಡಿದೆ ಎಂದು ನೋಡಲು ಬಂದ ರೈತನಿಗೆ ಶವ ಬಿದ್ದಿದ್ದು ಗೊತ್ತಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಸಾಗಿಸಿದರು.
₹1.90 ಕೋಟಿ ಸಾಲ: ರಾಜು ಝಂವರ ಅವರು ಗೋಕಾಕದ ತಜ್ಞವೈದ್ಯ ಡಾ.ಸಚಿನ ಶಿರಗಾಂವಿ ಅವರಿಗೆ ₹ 1.90 ಕೋಟಿ ಸಾಲ ನೀಡಿದ್ದರು. ಈ ಸಾಲ ಮರಳಿ ಕೊಡುವಂತೆ ಪದೇಪದೇ ಪೀಡಿಸುತ್ತಿದ್ದರು. ಮರಳಿಸಲಾಗದ ಡಾ.ಸಚಿನ್, ಇನ್ನೊಬ್ಬ ಆಯುರ್ವೇದ ವೈದ್ಯ ಡಾ.ಶಿವಾನಂದ ಪಾಟೀಲ ಹಾಗೂ ಫ್ರಿಜ್ ದುರಸ್ತಿ ಮಾಡುತ್ತಿದ್ದ ಶಾಪಥ್ ಇರ್ಷಾದ್ಅಹ್ಮದ್ ತ್ರಾಸಗರ ಅವರ ನೆರವಿನೊಂದಿಗೆ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆರಳಚ್ಚು ಅಥವಾ ಶ್ವಾನದಳಕ್ಕೆ ಯಾವುದೇ ಕುರುಹು ಸಿಗದಂತೆ ಮುನ್ನೆಚ್ಚರಿಕೆ ವಹಿಸಿ ವೈದ್ಯರು ಕೊಲೆ ಮಾಡಿದ್ದರು. ಪಿಪಿಇ ಕಿಟ್ನಲ್ಲಿ ಶವವನ್ನು ತುಂಬಿ ಕಾಲುವೆಯಲ್ಲಿ ಎಸೆದಿದ್ದರು. ಹೀಗಾಗಿ, ವ್ಯಾಪಾರಿ ಕಾಣೆಯಾಗಿದ್ದಾರೆ ಎಂದೇ ಕುಟುಂಬದವರು ಭಾವಿಸಿದ್ದರು. ವೈದ್ಯರನ್ನು ವಿಚಾರಣೆ ಮಾಡುವ ವೇಳೆ ಅವರ ಕಾರಿನಲ್ಲಿ ರಕ್ತದ ಕಲೆಗಳು ಸಿಕ್ಕಿದ್ದವು. ಇದರ ಜಾಡು ಹಿಡಿದು ಹೊರಟ ಪೊಲೀಸರಿಗೆ ಕೊಲೆ ನಡೆದಿದ್ದು ಖಾತ್ರಿಯಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.
ಪ್ರಕರಣ ಬೇಧಿಸುವಲ್ಲಿ ಹಗಲಿರುಳು ಶ್ರಮಿಸಿದ ಪೊಲೀಸ್ ತಂಡವನ್ನು ಎಸ್ಪಿ ಅಭಿನಂದಿಸಿದ್ದಾರೆ.
Laxmi News 24×7