ಘಟಪ್ರಭಾ: ಸಮೀಪ ಗೋಕಾಕ ಜಲಪಾತದ ಬಳಿ ಇರುವ ಪ್ರಾಚೀನ ಕಾಲದ ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಇದೇ 17ರಿಂದ 19ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೂ ನಡೆಯಲಿವೆ.
ಪದರು ಶಿಲೆಗಳ ಮಧ್ಯೆ ನಿರ್ಮಾಣ ಮಾಡಿದ್ದು ಈ ದೇವಾಲಯದ ವಿಶೇಷ.
ನಿಖರವಾಗಿ ಇದರ ಪುರಾತನ ಕಾಲ ತಿಳಿದುಬಂದಿಲ್ಲ. ಆದರೆ, ದೇವಾಲಯವು ತಡಸಲ ಮಹಾಲಿಂಗೇಶ್ವರನೆಂದು (ತಟಾಕೇಶ್ವರ) ಖ್ಯಾತಿ ಪಡೆದಿದೆ. ಹೀಗಾಗಿ, ಅನಾದಿ ಕಾಲದಿಂದಲೂ ಮಹಾಲಿಂಗೇಶ್ವರ ಇಲ್ಲಿ ಪೂಜೆಗೊಳ್ಳುತ್ತಿದ್ದಾರೆ ಎನ್ನುವುದು ವಾಡಿಕೆ.
ಅತ್ಯಂತ ನವಿರಾದ ಕೆತ್ತನೆಯ ಗೋಡೆಗಳು, ಪುಷ್ಪಾಕಾರದ ತಳಪಾಯ, ನುಣುಪಾಗಿ ಕೆತ್ತಿದ ಕಂಬಗಳು, ಪೌರಾಣಿಕ ದೃಷ್ಟಾಂತ ಬಿಂಬಿಸುವ ಶಿಲ್ಪಕಲಾಕೃತಿ, ಚಾಲುಕ್ಯ ಶೈಲಿಯ ಕೆತ್ತನೆಗಳು ಈ ದೇವಸ್ಥಾನದ ಸೌಂದರ್ಯ ಹೆಚ್ಚಿಸಿವೆ. ತಿಳಿಕೆಂಪು ಶಿಲೆಯ ಈ ದೇವಸ್ಥಾನ ಇಳಿಸಂಜೆಯಲ್ಲಿ ಬಂತಾರ ತೀಡಿದಂತೆ ಕಾಣುವುದು ವಿಶೇಷ.
ಗೋಕಾಕ ಜಲಪಾತದ ಸೌಂದರ್ಯ ನೋಡಲು ಬರುವವರು ಈ ದೇವಸ್ಥಾನವನ್ನು ಒಮ್ಮೆ ನೋಡಲೇಬೇಕು.
ಸರ್ವಧರ್ಮೀಯರೂ, ಸರ್ವ ಜಾತಿಯವರೂ ಒಂದಾಗಿ ಪಾಲ್ಗೊಳ್ಳುವುದೇ ಈ ಜಾತ್ರೆಯ ವಿಶೇಷ. ಎಲ್ಲ ಸಮುದಾಯಗಳ ಜನರೂ ಒಂದಾಗುವ ಕಾರಣ ಇದನ್ನು ಸಾಮರಸ್ಯದ ತೊಟ್ಟಿಲು ಎಂದೇ ಕರೆಯುತ್ತಾರೆ.
ಐತಿಹ್ಯ: ಈ ದೇವಾಲಯ ವಸಿಷ್ಠ ಮುನಿಯಿಂದ ಪೂಜಿತವಾಗಿದೆ. ಜಕಣಾಚಾರಿ ಅವರಿಂದ ನಾಗಶಿಲ್ಪದಲ್ಲಿ ನಿರ್ಮಿತವಾಗಿದೆ ಎಂಬ ದಾಖಲೆಗಳು ಇಲ್ಲಿ ಸಿಗುತ್ತವೆ. ಗರ್ಭಗುಡಿಯಲ್ಲಿರುವ ಭವ್ಯವಾದ ಶಿವಲಿಂಗವು ಇತಿಹಾಸ ಸಾರುತ್ತದೆ.
ಗೋಕಾಕ ವಿದ್ಯುತ್ ಸ್ಥಾವರ ಹಾಗೂ ಗೋಕಾಕ ಟೆಕ್ಸ್ಟೈಲ್ ಮಿಲ್ನ ಆಡಳಿತ ಮಂಡಳಿಯವರು ಪ್ರತಿ ವರ್ಷ ಶ್ರದ್ಧಾ- ಭಕ್ತಿಯಿಂದ ಜಾತ್ರೆ ಆಚರಿಸುತ್ತ ಬಂದಿದ್ದಾರೆ.
ಜಾತ್ರೆ ವಿವರ: ಫೆ. 17ರಂದು ಸಂಜೆ 6 ಗಂಟೆಗೆ ಯರಗಲ್ ಮಠದ ಅಭಿನಂದನ ಸ್ವಾಮಿಗಳು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡುವರು. ಗೋಕಾಕ ಮಿಲ್ಲಿನ ಸಿಇಒ ಆರ್.ಆರ್. ಪಾಟೀಲ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ ಮಹಾಲಿಂಗ ಮಂಗಿ ಆಧ್ಯಾತ್ಮಿಕ ಹಿನ್ನೆಲೆ ಬಗ್ಗೆ ಮಾತನಾಡುವರು.
ಫೆ. 18ರಂದು ಬೆಳಿಗ್ಗೆ 6 ಗಂಟೆಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ನೈವೇದ್ಯ ನಂತರ ಭಜನೆ ಜರುಗಲಿದೆ. ಸಂಜೆ 4.30ಕ್ಕೆ ಮರಡಿಮಠದ ಪವಾಡೇಶ್ವರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಭವ್ಯ ರಥೋತ್ಸವಕ್ಕೆ ಶಾಸಕ ರಮೇಶ ಜಾರಕಿಹೊಳಿ ಚಾಲನೆ ನೀಡಲಿದ್ದಾರೆ. ಕಾರ್ಮಿಕ ಧುರೀಣ ಅಂಬಿರಾವ್ ಪಾಟೀಲ, ಡಿವೈಎಸ್ಪಿ ಡಿ.ಎಚ್. ಮುಲ್ಲಾ, ಸಿಪಿಐ ಗೋಪಾಲ ರಾಥೋಡ, ಪಿಎಸ್ಐ ಎಂ.ಡಿ. ಘೋರಿ ಉಪಸ್ಥಿತರಿರುವರು.
ಪೆ.19ರಂದು ಬೆಳಗಿನಜಾವ ಮಹಾರುದ್ರಾಭಿಷೇಕ, ನೈವೇದ್ಯ ಸಮರ್ಪಣೆ, ಪಲ್ಲಕ್ಕಿ ಉತ್ಸವದ ನಂತರ ಮಹಾಪ್ರಸಾದ ಜರುಗಲಿದೆ. ಇದರೊಂದಿಗೆ ಎಲ್ಲ ಕಾರ್ಯಕ್ರಮಗಳೂ ಸಂಪನ್ನವಾಗಲಿವೆ.