ಗದಗ: ‘ಮಹಾರಾಷ್ಟ್ರದ ಬಂಡಾಯದ ಹಿಂದೆ ಬಿಜೆಪಿ ಇದೆ. ಬಿಜೆಪಿಯೇ ಅದರ ಹಿಂದಿನ ಸೀಟಿನ ಚಾಲಕ’ ಎಂದು ಶಾಸಕ ಎಚ್.ಕೆ.ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಬಿಜೆಪಿಯವರು ಈ ಹಿಂದೆ ಕರ್ನಾಟಕದಲ್ಲಿ 17 ಮಂದಿ ಶಾಸಕರ ರಾಜೀನಾಮೆ ಕೊಡಿಸಿ, ಸಮ್ಮಿಶ್ರ ಸರ್ಕಾರ ಬೀಳಿಸಿದರು.
ಅಪರೇಷನ್ ಕಮಲದ ಮುಂದಿನ ಭಾಗವಾಗಿ ಮಹಾರಾಷ್ಟ್ರದಲ್ಲಿ ಇಡೀ ಪಕ್ಷವನ್ನೇ ಒಡೆಯಲು ಬಿಜೆಪಿ ಮುಂದಾಗಿದೆ’ ಎಂದು ಅವರು ಆರೋಪ ಮಾಡಿದರು.
‘ದೇಶದ ಜನರನ್ನು ಭಯದ ನೆರಳಿನಲ್ಲಿ ಇಟ್ಟು ರಾಜ್ಯಭಾರ ನಡೆಸಲು ಸಾಧ್ಯವಿಲ್ಲ. ಜನರು ಶಿವಸೇನೆಯ ಜತೆಗಿದ್ದಾರೆ. ಇಂತಹ ಸನ್ನಿವೇಶಗಳನ್ನು ಸೃಷ್ಟಿಸುತ್ತಿರುವ ಬಿಜೆಪಿಗೆ ಬರುವ ದಿನಗಳಲ್ಲಿ ಜನರೇ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್ನ 44 ಶಾಸಕರು ಒಗ್ಗಟ್ಟಾಗಿದ್ದೇವೆ. ಸರ್ವಾನುಮತದಿಂದ ಮಹಾ ವಿಕಾಸ ಅಘಾಡಿಯನ್ನು ಬೆಂಬಲಿಸಲು ನಿರ್ಣಯಿಸಿದ್ದೇವೆ’ ಎಂದು ಹೇಳಿದರು.