ಬೆಂಗಳೂರು,ಆ.12-ಕೋವಿಡ್ ಸೋಂಕು ಉಲ್ಬಣವಾಗದಿದ್ದರೆ ಈಗಾಗಲೇ ಪ್ರಕಟಿಸಿರುವಂತೆ ಶಾಲಾಕಾಲೇಜುಗಳನ್ನು ಆ.23ರಿಂದ ಪ್ರಾರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ಸಾರ್ವಜನಿಕ ಗ್ರಂಥಾಲಯ ಇಲಾಖೆ ಗ್ರಂಥಾಲಯ ದಿನಾಚರಣೆ ಅಂಗವಾಗಿ ಕಬ್ಬನ್ ಉದ್ಯಾನವನದಲ್ಲಿರುವ ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ಏರ್ಪಡಿಸಿದ್ದ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದದರು.
ಮಕ್ಕಳಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಗಮನಿಸಿದ್ದೇನೆ. ಯಾವ ವಯಸ್ಸಿನವರಲ್ಲಿ ಸೋಂಕು ಹೆಚ್ಚಾಗುತ್ತಿದೆ ಮತ್ತು ಅದರ ತೀವ್ರತೆ ಬಗ್ಗೆ ಆರೋಗ್ಯ ಇಲಾಖೆಯಿಂದ ಮಾಹಿತಿ ಪಡೆಯಲಾಗುವುದು. ಅಲ್ಲದೆ ಕೋವಿಡ್ ಸಲಹಾ ಸಮಿತಿಯ ಸಲಹೆಯನ್ನು ಪಡೆಯಲಾಗುವುದು.
ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಶಾಲಾಕಾಲೇಜು ಆರಂಭಕ್ಕೆ ಯಾವುದೇ ತೊಂದರೆ ಇಲ್ಲ ಎಂಬ ಸಲಹೆ ತಾಂತ್ರಿಕ ಸಮಿತಿ ನೀಡಿದರೆ ನಿಗದಿಯಂತೆ ಶಾಲಾಕಾಲೇಜು ಆರಂಭಿಸಲಾಗುವುದು. ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಒಂದು ವೇಳೆ ಕೋವಿಡ್ ಸೋಂಕು ಹೆಚ್ಚಳವಾದರೆ ಮತ್ತೊಮ್ಮೆ ಸಿಎಂ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಮಹಾರಾಜರ ಹಾಗೂ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯಿಂದ ಸ್ಥಾಪನೆಯಾದ ರಾಜ್ಯ ಕೇಂದ್ರ ಗ್ರಂಥಾಲಯಕ್ಕೆ 100 ವರ್ಷ ತುಂಬಿದೆ. ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಿದೆ. ಈ ಲೈಬ್ರರಿ ಬಗ್ಗೆ ಮನೆ ಮನೆಗೆ ತಲುಪಲಿ ಎಂದು ಹೇಳಿದರು. ಗ್ರಂಥಾಲಯ ವಿಜ್ಞಾನದ ಪಿತಾಮಹ ಎಸ್.ಆರ್.ರಂಗನಾಥ್ ಅವರ ಕೊಡುಗೆಯಿಂದಾಗಿ ಸಾಮಾನ್ಯ ಕುಟುಂಬಗಳ ಸಹ ಜ್ಞಾನಾರ್ಜನೆ ಮಾಡಿ ಉನ್ನತ ಸ್ಥಾನಕ್ಕೇರಲು ಸಹಾಯವಾಗಿದೆ ಎಂದರು.
ಇದಕ್ಕೂ ಮುನ್ನ ಭಾರತೀಯ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ.ಎಸ್.ಆರ್.ರಂಗನಾಥ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ್ಕುಮಾರ್ ಎಸ್.ಹೊಸಮನಿ, ನಿವೃತ್ತ ನಿರ್ದೇಶಕ ಡಾ.ಪಿ.ವೈ.ರಾಜೇಂದ್ರಕುಮಾರ್, ಸಾಹಿತಿ ಶೂದ್ರ ಶ್ರೀನಿವಾಸ್, ಎಲ್.ಐ ಅಕಾಡೆಮಿ ಅಧ್ಯಕ್ಷರಾದ ಡಾ.ಪಿ.ವಿ.ಕೊಣ್ಣೂರು ಹಾಗೂ ನಗರ ಕೇಂದ್ರ ಗ್ರಂಥಾಲಯಗಳ ಉಪನಿರ್ದೇಶಕರುಗಳು ಹಾಜರಿದ್ದರು.