ಮೈಸೂರು: ಕೋವಿಡ್ ತಡೆಯುವುದಕ್ಕಾಗಿ ಕಟ್ಟುನಿಟ್ಟಾದ ಲಾಕ್ಡೌನ್ ವಿಧಿಸಿದ್ದರು, ಈ ನಿಯಮ ಉಲ್ಲಂಘಿಸಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ನಡೆದುಕೊಂಡಿರುವ ಕಾರಣ ಅವರ ವಿರುದ್ಧ ಎಫ್ಐಆರ್ ದಾಖಲು ಮಾಡಬೇಕು ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಒತ್ತಾಯಿಸಿದೆ.
ವೈ. ವಿಜಯೇಂದ್ರ ಮೇ 18ರಂದು ಕುಟುಂಬ ಸಮೇತರಾಗಿ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದರು. ವಿಶೇಷ ಪೂಜೆ ಹಾಗೂ ಹೋಮ ನಡೆಸಿದ್ದರು. ಇದು ಡಿಸಾಸ್ಟರ್ ಮ್ಯಾನೇಜ್ಮೆಂಟ್ ಕಾಯ್ದೆ 2005, ಸೆಕ್ಷನ್ 51 ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಕಾರಣದಿಂದಾಗಿ ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದುbಮೈಸೂರು ಜಿಲ್ಲಾ ಕಾಂಗ್ರೆಸ್ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಮನವಿಯ ಮೂಲಕ ಒತ್ತಾಯಿಸಲಾಗಿದೆ.
“ವಿಜಯೇಂದ್ರ ದೇವಾಲಯಕ್ಕೆ ಭೇಟಿ ನೀಡಲು ಸಹಕಾರ ನೀಡಿದ ಇಲಾಖೆಗಳಿಗೆ ಹಾಗೂ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸರ್ಕಾರಿ ಸಿಬ್ಬಂದಿ/ ಪುರೋಹಿತ ವರ್ಗದವರನ್ನು ಕೂಡಲೇ ಅಮಾನತು ಮಾಡಿ, ಅವರುಗಳ ವಿರುದ್ಧ ಕೂಡ ಎಫ್ಐಆರ್ ದಾಖಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು” ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಜೆ. ವಿಜಯ್ ಕುಮಾರ್ ಮನವಿ ಮಾಡಿದ್ದಾರೆ.
ದೂರು ಸ್ವೀಕರಿಸಿದ ರೋಹಿಣಿ ಸಿಂಧೂರಿ, ಈ ಸಂಬಂಧ ತನಿಖೆ ನಡೆಸಿ, ಕ್ರಮವಹಿಸುವಂತೆ ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರಿನ ಪತ್ರದ ಮೇಲೆ ಬರವಣಿಗೆ ಮೂಲಕ ದಾಖಲಿಸಿದ್ದಾರೆ.