ಬೆಂಗಳೂರು, ಮೇ. 13: ರಾಜ್ಯದ ಜನತೆಗೆ ಯಾವಾಗ ವ್ಯಾಕ್ಸಿನ್ ಕೊಡ್ತೀರಿ ? 31 ಲಕ್ಷ ಮಂದಿಗೆ ಎರಡನೇ ಡೋಸ್ ವ್ಯಾಕ್ಸಿನ್ ಯಾವಾಗ ನೀಡ್ತೀರಾ? ನಿಮಗೆ ನೀಡಲು ಸಾಧ್ಯವಿಲ್ಲ ಎನ್ನುವುದಾದರೆ ಹೇಳಿ. ನಿಮ್ಮ ಹೇಳಿಕೆಯನ್ನು ಹಾಗೇ ನ್ಯಾಯಾಲಯ ದಾಖಲಿಸಿಕೊಳ್ಳುತ್ತದೆ !
ಕೊರೊನಾ ಎರಡನೇ ಅಲೆಗೆ ತುತ್ತಾಗಿರುವ ಜನರ ಆರೋಗ್ಯ ರಕ್ಷಣೆ ಮಾಡುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ಚಾಟಿ ಬೀಸಿದೆ. ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ಎಡವಿದೆ. ಇದರಿಂದ ಜನ ಸಾಮಾನ್ಯರು ಬೀದಿಯಲ್ಲಿ ಉಸಿರು ಬಿಡುತ್ತಿದ್ದಾರೆ. ಇಂತಹ ಸಂಕಷ್ಟ ಕಾಲದಲ್ಲಿ ರಾಜ್ಯದ ಜನರ ರಕ್ಷಣೆ ವಿಚಾರದಲ್ಲಿ ಹೈಕೋರ್ಟ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಮಹತ್ವದ ತೀರ್ಪುಗಳನ್ನು ನೀಡುತ್ತಿದೆ. ರಾಜ್ಯಕ್ಕೆ ಮತ್ತು ರಾಜ್ಯದ ಜನತೆಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮಹತ್ವದ ತೀರ್ಪುಗಳನ್ನು ನೀಡುತ್ತಿದ್ದಾರೆ. ರಾಜ್ಯ ಸರ್ಕಾರ ಮಾಡಬೇಕಾದ ಕೆಲಸವನ್ನು ನ್ಯಾಯಾಲಯವೇ ಮಾಡುತ್ತಿದೆ.
ಹೈಕೋರ್ಟ್ನಿಂದ ಆಕ್ಸಿಜನ್ ಬಂತು
ರಾಜ್ಯ ಆಕ್ಸಿಜನ್ ಕೊರತೆ ಎದುರಿಸುತ್ತಿತ್ತು. ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಹೊರ ರಾಜ್ಯಗಳಿಗೆ ಹೋಗುತ್ತಿತ್ತು. ರಾಜ್ಯ ಸರ್ಕಾರ ಆಕ್ಸಿಜನ್ ಪೂರೈಕೆ ಮಾಡದೇ ಎಷ್ಟೋ ಮಂದಿ ಆಕ್ಸಿಜನ್ ಸಿಗದೇ ಜೀವ ಕಳೆದುಕೊಂಡಿದ್ದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ರಾಜ್ಯ ತನ್ನ ಪ್ರಭಾವ ಬೀರಿ ಆಕ್ಸಿಜನ್ ಪಡೆಯುವಲ್ಲಿ ವಿಫಲವಾಗಿತ್ತು. ಈ ಸಂಕಷ್ಟ ಕಾಲದಲ್ಲಿ ಮಧ್ಯ ಪ್ರವೇಶಿಸಿದ ಹೈಕೋರ್ಟ್ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡು ರಾಜ್ಯಕ್ಕೆ ಆಗತ್ಯ ಇರುವ 1250 ಟನ್ ಲಿಕ್ವಿಡ್ ಆಕ್ಸಿಜನ್ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಹೈಕೋರ್ಟ್ ಆದೇಶವನ್ನು ಕೇಂದ್ರ ಸರ್ಕಾರ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಆದರೆ ಸುಪ್ರೀಂಕೋರ್ಟ್ ರಾಜ್ಯ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿತ್ತು. ಅನಿವಾರ್ಯವಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಆಕ್ಸಿಜನ್ ಪೂರೈಸಬೇಕಾಯಿತು.
ಹೈಕೋರ್ಟ್ನಿಂದ ಅನ್ನ ಸಿಗುವಂತಾಯಿತು !
ಯಾವುದೇ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡದೇ ರಾಜ್ಯದಲ್ಲಿ ಹದಿನಾಲ್ಕು ದಿನಗಳ ಲಾಕ್ ಡೌನ್ ಘೊಷಣೆ ಮಾಡಿ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಮಾಡಿದ್ದರು. ಬಡವರಿಗೆ ಆಹಾರ ಭದ್ರತೆ ಒದಗಿಸಬೇಕು. ಇಂದಿರಾ ಕ್ಯಾಂಟೀನ್ ಮೂಲಕ ಬಡವರಿಗೆ ಉಚಿತ ಆಹಾರ ಒದಗಿಸುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪೀಠ ನಿರ್ದೇಶನ ನೀಡಿತು. ಬಡವರಿಗೆ ಆಹಾರ ಭದ್ರತೆ ಒದಗಿಸುವುದಾಗಿ ಅಡ್ವೋಕೇಟ್ ಜನರಲ್ ಅರವಿಂದ ನಾವಡಗಿ ಅವರು ಹೈಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸಿದ್ದರು. ಗ್ರಾಮೀಣ ಭಾಗದ ಜನರಿಗೂ ಆಹಾರ ಪದಾರ್ಥಗಳನ್ನು ಒದಗಿಸುವಂತೆ ನ್ಯಾಯಾಲಯ ಸೂಚಿಸಿತು. ರಾಜ್ಯದ ಬಡವರ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ಹೈಕೋರ್ಟ್ ರಾಜ್ಯ ಸರ್ಕಾರದ ಕಿವಿ ಹಿಂಡಿತ್ತು.
ಈಗ ವ್ಯಾಕ್ಸಿನ್ಗಾಗಿ ಹೈಕೋರ್ಟ್ ತರಾಟೆ : ರಾಜ್ಯದ ಜನತೆಗೆ ತ್ವರಿತವಾಗಿ ಲಸಿಕೆ ನೀಡುವಂತೆ ನಿರ್ದೇಶನ ನೀಡಿರುವ ಹೈಕೋರ್ಟ್ ಲಸಿಕೆ ಅಭಿಯಾನದ ವಿಚಾರವಾಗಿ ರಾಜ್ಯ ಸರ್ಕಾರದ ವಿಫಲತೆ ಬಗ್ಗೆ ಕೆಂಡಾಮಂಡಲವಾಗಿದೆ. ರಾಜ್ಯದ ಜನತೆಗೆ ಯಾವಾಗ ವ್ಯಾಕ್ಸಿನೇಷನ್ ಕೊಡ್ತೀರಿ ? 31 ಲಕ್ಷ ಮಂದಿ ಇನ್ನೂ ಎರಡನೇ ಡೋಸ್ ವ್ಯಾಕ್ಸಿನ್ ಗಾಗಿ ಕಾಯುತ್ತಿದ್ದಾರೆ. ನಿಮಗೆ ನೀಡಲು ಸಾಧ್ಯವಿಲ್ಲದಿದ್ದರೆ ಹೇಳಿ. ಹಾಗೇ ದಾಖಲಿಸಿಕೊಳ್ಳುತ್ತೇನೆ. ಇನ್ನೂ ನೀವು ಒಂದು ಪರ್ಸೆಂಟ್ ಜನಕ್ಕೆ ಲಸಿಕೆ ನೀಡಿಲ್ಲ. ರಾಜ್ಯದಲ್ಲಿ ಆರು ಕೋಟಿಗೂ ಅಧಿಕ ಜನ ಸಂಖ್ಯೆಯಿದೆ. ನೀವು ಲಸಿಕೆ ನೀಡಿರುವುದು ಕೇವಲ ಒಂದು ಪರ್ಸೆಂಟ್ ಜನಕ್ಕೆ ಮಾತ್ರ. ಲಸಿಕೆ ಅಭಿಯಾನ ರಾಜ್ಯದಲ್ಲಿ ಯಶಸ್ವಿಯಾಗಿಲ್ಲ. ಇನ್ನೆರಡು ದಿನದಲ್ಲಿ 31 ಲಕ್ಷ ಮಂದಿಗೆ ಎರಡನೇ ಡೋಸ್ ನೀಡದಿದ್ದರೆ ಹೈಕೋರ್ಟ್ ಆದೇಶಿಸಬೇಕಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಒಳಗೊಂಡ ಪೀಠ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.