ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್ ಭೀತಿಯಿಂದಾಗಿ ಸ್ತಬ್ಧಗೊಂಡಿದ್ದ ರೈಲು ಸೇವೆ ಸದ್ಯಕ್ಕೆ ಆರಂಭಗೊಳ್ಳುವುದಿಲ್ಲ. ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ಐಆರ್ಸಿಟಿಸಿ, ರೈಲುಗಳ ಬುಕಿಂಗ್ ಅನ್ನು ಏಪ್ರಿಲ್ 30 ರವರೆಗೆ ಸ್ಥಗಿತಗೊಳಿಸಲು ನಿರ್ಧರಿಸಿದೆ.
ಈ ಮಧ್ಯೆ ಐಆರ್ಸಿಟಿಸಿ ಸದ್ಯ ಮೂರು ರೈಲುಗಳನ್ನು ಓಡಿಸಲಿದೆ. 2 ತೇಜಸ್ ರೈಲುಗಳು ಮತ್ತು 1 ಕಾಶಿ ಮಹಕಲ್ ಎಕ್ಸ್ಪ್ರೆಸ್ ರೈಲು ಸಂಚರಿಸಲಿದೆ.
ತೇಜಸ್ ಎಕ್ಸ್ಪ್ರೆಸ್ ರೈಲು ಅಹಮದಾಬಾದ್ – ಮುಂಬೈ ಮಧ್ಯ ಸಂಚರಿಸಿದರೆ, ಕಾಶಿ ಮಹಕಲ್ ಎಕ್ಸ್ಪ್ರೆಸ್ ದೆಹಲಿ-ಲಕ್ನೋ ಮಧ್ಯ ಸಂಚರಿಸಲಿದೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಮಾಡಿರುವ ಪ್ರಯಾಣಿಕರ ಹಣವನ್ನು ವಾಪಸ್ ಬ್ಯಾಂಕ್ ಖಾತೆಗೆ ಮರು ಪಾವತಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್, ಭಾರತೀಯ ರೈಲ್ವೆಯ 2,500 ಬೋಗಿಗಳಲ್ಲಿ 40,000 ಪ್ರತ್ಯೇಕ ಹಾಸಿಗೆಗಳನ್ನು ಸಿದ್ಧಪಡಿಸಿದೆ. ರೈಲ್ವೆ ಇಲಾಖೆ ಪ್ರತಿದಿನ 375 ಪ್ರತ್ಯೇಕ ಹಾಸಿಗೆಗಳನ್ನು ತಯಾರಿಸುತ್ತಿದೆ ಮತ್ತು ಇದು ದೇಶಾದ್ಯಂತ 133 ಸ್ಥಳಗಳಲ್ಲಿ ನಡೆಯುತ್ತಿದೆ ಎಂದು ತಿಳಿಸಿದ್ದರು.