ಬೆಂಗಳೂರು: ಪೊಲೀಸ್ ಪೇದೆ ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದ ಆರೋಪಿಯನ್ನು ಬಗಲುಗುಂಟೆ ಪೊಲೀಸರು ಬಂಧಿಸಿದ್ದಾರೆ. ಫಕೀರಪ್ಪ ಬಂಧಿತ ಆರೋಪಿ.
ಮೂಲತಃ ಕೊಪ್ಪಳ ಮೂಲದ ಆರೋಪಿ ಬಗಲುಗುಂಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಪೊಲೀಸ್ ಆಗುವ ಕನಸು ಕಂಡಿದ್ದ ಆತ ಎರಡು ಬಾರಿ ಪರೀಕ್ಷೆ ಬರೆದು ಅದರಲ್ಲಿ ಫೇಲಾಗಿದ್ದ ಎನ್ನಲಾಗಿದೆ. ಆದರೆ ತಾನು ವಾಸಿಸುತ್ತಿದ್ದ ಬಾಡಿಗೆ ಮನೆಯ ಮಾಲೀಕರಿಗೂ ಸೇರಿದಂತೆ ಎಲ್ಲರಿಗೂ ತಾನು ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಪೇದೆ ಎಂದು ಸುಳ್ಳು ಹೇಳಿದ್ದನಂತೆ. ಅದೇ ರೀತಿ ಹೇಳಿಕೊಂಡು ರಸ್ತೆ ಬದಿಯ ವ್ಯಾಪಾರಿಗಳು, ಪಿಜಿ ಮಾಲೀಕರಿಗೆ ಧಮ್ಕಿ ಹಾಕಿ ಹಫ್ತಾ ವಸೂಲಿ ಮಾಡ್ತಿದ್ದ ಎಂಬ ಆರೋಪ ಕೇಳಿಬಂದಿದೆ.
ಇದೇ ಜನವರಿ 26 ರಂದು ದಾಸರಹಳ್ಳಿಯ ಪಿಜಿ ಬಳಿ ತೆರಳಿದ್ದ ಆರೋಪಿ ಪಿಜಿಯಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದೀರಾ? ಕೇಸ್ ಹಾಕ್ತೀನಿ ಎಂದು ಹೆದರಿಸಿ 10 ಸಾವಿರ ರೂಪಾಯಿ ಸುಲಿಗೆ ಮಾಡಿದ್ದ ಎನ್ನಲಾಗಿದೆ. ಈ ಸಂಬಂಧ ಪಿಜಿ ಮಾಲೀಕ ಸುರೇಶ್ ಬಗಲುಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು, ಪೊಲೀಸರ ವಿಚಾರಣೆಯಲ್ಲಿ ಸತ್ಯಾಂಶ ಬೆಳಕಿಗೆ ಬಂದಿದೆ ಎನ್ನಲಾಗಿದೆ.