ಬೆಂಗಳೂರು(ಡಿ.24): ನಾಳೆ ವೈಕುಂಠ ಏಕಾದಶಿ. ಕೊರೋನಾ ಬಂದಿಲ್ಲ ಎಂದಿದ್ದರೆ ಎಲ್ಲಾ ದೇವಾಲಯಗಳಲ್ಲೂ ಭಕ್ತರದ್ದೇ ಕಾರುಬಾರು ಇರುತ್ತಿತ್ತು. ಪ್ರತೀ ವರ್ಷ ಸಂಭ್ರಮದಿಂದ ಆಚರಿಸಲಾಗುತ್ತಿದ್ದ ವೈಕುಂಠ ಏಕಾದಶಿಯನ್ನು ಈ ವರ್ಷ ಆಚರಿಸಲು ಸಾಧ್ಯವಿಲ್ಲ. ಕಾರಣ ಮಹಾಮಾರಿ ಕೊರೋನಾ. ಹೌದು, ಈ ಕೊರೋನಾ ಕಾರಣದಿಂದಾಗಿ ನಾಳಿನ ವೈಕುಂಠ ಏಕಾದಶಿಯಂದು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ. ಬೆಂಗಳೂರಿನ ಬಹುತೇಕ ಎಲ್ಲಾ ದೇವಾಲಯಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗುತ್ತದೆ ಎಂದು ತಿಳಿದು ಬಂದಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ದೇವಾಲಯಗಳಿಗೆ ಭಕ್ತರ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಸರ್ಕಾರದ ಆದೇಶದಂತೆ ಪೂಜೆಗಳು ನಡೆಯುತ್ತವೆ, ಆದರೆ ಭಕ್ತರಿಗೆ ದೇವಾಲಯದೊಳಗೆ ಪ್ರವೇಶವಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.ಇನ್ನು, ಇಸ್ಕಾನ್ ದೇವಾಲಯದಲ್ಲಿ ಭಕ್ತರಿಗೆ ಆನ್ಲೈನ್ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ. ದೇವಸ್ಥಾನದ ಅಧಿಕೃತ ವೆಬ್ ಸೈಟ್ ಆದ www.iskconbangalore.org ನಲ್ಲಿ ಇಡೀ ಕಾರ್ಯಕ್ರಮದ ನೇರ ಪ್ರಸಾರವನ್ನು ನೋಡಬಹುದಾಗಿದೆ.