ಬೆಂಗಳೂರು: ತಮಿಳುನಾಡು, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಬಿಜೆಪಿ ಉಸ್ತುವಾರಿಯಾಗಿ ಆಯ್ಕೆಯಾಗಿರುವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರಿಗೆ ಮಾಜಿ ಐಪಿಎಸ್ ಅಣ್ಣಾಮಲೈ ಶುಭ ಕೋರಿದ್ದಾರೆ.
ಇತ್ತೀಚೆಗಷ್ಟೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಮಾಜಿ ಸಚಿವ ಸಿಟಿ ರವಿ ಅವರ ಹೆಗಲಿಗೆ ಮೂರು ರಾಜ್ಯಗಳ ಉಸ್ತುವಾರಿಯನ್ನು ನೀಡಲಾಗಿದೆ. ತಮಿಳುನಾಡು, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಉಸ್ತುವಾರಿಯನ್ನು ಸಿಟಿ ರವಿ ಅವರಿಗೆ ವಹಿಸಲಾಗಿದೆ. ಕಾರ್ಕಳ ಶಾಸಕ ಸುನೀಲ್ ಕುಮಾರ್ ಕೇರಳ ಸಹ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.
ಬಿಹಾರ ವಿಧಾನಸಭಾ ಚುನಾವಣೆ ಹಾಗೂ ವಿವಿಧ ರಾಜ್ಯಗಳ ಉಪಚುನಾವಣೆಯ ಬೆನ್ನಲ್ಲೇ ಬಿಜೆಪಿ ಪಕ್ಷವನ್ನು ಮತ್ತಷ್ಟು ಬಲಗೊಳಿಸಲು ಹೈ ಕಮಾಂಡ್ ಮುಂದಾಗಿದ್ದು, ರಾಜ್ಯಗಳ ಉಸ್ತುವಾರಿಯ ಹೊಸ ತಂಡವನ್ನು ದೀಪಾವಳಿ ಮುನ್ನ ದಿನ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಹಲವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಉಸ್ತುವಾರಿ ಮತ್ತು ಸಹ ಉಸ್ತುವಾರಿಗಳನ್ನು ನೇಮಿಸಿ ಆದೇಶ ನೀಡಿದ್ದರು.
ಕರ್ನಾಟಕ ರಾಜ್ಯದ ಉಸ್ತುವಾರಿಯಾಗಿ ಅರುಣ್ ಸಿಂಗ್ ಅವರನ್ನು ನೇಮಕ ಮಾಡಲಾಗಿದ್ದು, ಉಪ ಉಸ್ತುವಾರಿಯಾಗಿ ತೆಲಂಗಾಣದ ಗದ್ವಾಲ ಮೂಲದ ಅರುಣಾ ಅವರನ್ನು ನೇಮಿಸಲಾಗಿದೆ. ರಾಜ್ಯದ ಇನ್ನೊಬ್ಬ ಮುಖಂಡ ನಿರ್ಮಲ ಕುಮಾರ್ ಸುರಾನಾ ಅವರನ್ನು ನೆರೆಯ ಪುದುಚೇರಿಗೆ ನಿಯೋಜಿಸಲಾಗಿದೆ. ಇದೂವರೆಗೂ ರಾಜ್ಯದ ಉಸ್ತುವಾರಿಯಾಗಿದ್ದ ಪಿ.ಮುರುಳೀಧರ ರಾವ್ ಅವರಿಗೆ ಮಧ್ಯಪ್ರದೇಶದ ಹೊಣೆ ವಹಿಸಲಾಗಿದೆ.
Laxmi News 24×7