ಉಡುಪಿ: ಕೊರೊನಾ ಕರಾಳತೆಯಿಂದ ಹೊರಬಂದು ದೀಪಾವಳಿಗೆ ಪಟಾಕಿ ಸಿಡಿಸೋಣ ಅಂತ ಜನ ಹಾಕಿದ್ದ ಲೆಕ್ಕಾಚಾರ ಉಲ್ಟಾ ಆಗಿದೆ. ರಾಜ್ಯ ಸರ್ಕಾರ ರಾಸಾಯನಿಕ ಪಟಾಕಿ ನಿಷೇಧ ಮಾಡಿ, ದುಷ್ಪರಿಣಾಮ ರಹಿತ ಪಟಾಕಿಗೆ ಮಣೆ ಹಾಕಿದೆ. ನಿಮ್ಮ ಪಟಾಕಿ ರಗಳೆಯೇ ಬೇಡ ಅಂತ ಉಡುಪಿಯ ಪರ್ಕಳ ಫ್ರೆಂಡ್ಸ್ ತಾವೇ ಪಟಾಕಿ ತಯಾರು ಮಾಡಲು ಮುಂದಾಗಿದ್ದಾರೆ.
ಭೂಮಿ ಅದುರಿ ಬಾನು ಬಿರಿಯುವ ಪಟಾಕಿಗೆ ಈ ಬಾರಿ ಕೊರೊನಾ ಬ್ರೇಕ್ ಹಾಕಿದೆ. ಕಣ್ಣು ಬಿಡಲಾಗದ, ದಟ್ಟ ಹೊಗೆಯಿಂದ ಸುತ್ತಲ ಪರಿಸರ ನಾಶ ಮಾಡುವ ಪಟಾಕಿಯನ್ನು ಸಿಎಂ ಯಡಿಯೂರಪ್ಪ ಬ್ಯಾನ್ ಮಾಡಿದ್ದಾರೆ. ತಮಿಳ್ನಾಡು ಪಟಾಕಿಯೂ ಬೇಡ, ಹಸಿರು ಪಟಾಕಿಯೂ ಬೇಡ ಅಂತ ಉಡುಪಿಯ ಪರ್ಕಳ ಫ್ರೆಂಡ್ಸ್ ಬಿದಿರು ಪಟಾಕಿ ತಯಾರಿಸಿದ್ದಾರೆ.
ಪಕ್ಕದ ಖಾಲಿ ಜಮೀನಿನಲ್ಲಿದ್ದ ಬಿದಿರು ಕಡಿದು ಶುಚಿ ಮಾಡಿದ್ದಾರೆ. ಏಳು ಗಂಟು ಇರುವ ಒಂದು ತುಂಡು ಬಿದಿರು. ಬುಡದ ಒಂದು ಗಂಟು ಬಿಟ್ಟು ಒಂದು ಬದಿಯಲ್ಲಿ ರಂಧ್ರ ಕೊರೆಯಬೇಕು. ಬಿದಿರು ಕೋಲಿನ ಎಲ್ಲಾ ಗಂಟುಗಳನ್ನು ಬಿಡಿಸಿದರೆ ಬಿದಿರು ಪಟಾಕಿ ಅರ್ಧ ರೆಡಿ.
ಬಿದಿರನ್ನು ಅಡ್ಡ ಮಲಗಿಸಿ ರಂಧ್ರಕ್ಕೆ ಸ್ವಲ್ಪ ಸೀಮೆ ಎಣ್ಣೆ ಸುರಿದು, ಸೈಕಲ್ ಪಂಪ್ ನಲ್ಲಿ ಅದೇ ರಂಧ್ರಕ್ಕೆ ಗಾಳಿ ಹಾಕಿ, ಅದೇ ರಂಧ್ರದ ಮೇಲೆ ಬೆಂಕಿ ಸೋಕಿಸಿದರೆ ಸಾಕು ಢಂ..! ಎಂಬ ಶಬ್ದ ಬರುತ್ತದೆ. ಹೊಗೆಯಿಲ್ಲ, ರಾಶಿ ಕಸ ಇಲ್ಲ. ನಯಾ ಪೈಸೆ ಖರ್ಚಿಲ್ಲ. ಮತ್ತೆ ಎರಡು ಚಮಚ ಸೀಮೆಯೆಣ್ಣೆ ತುಂಬಿಸಿ ಗಾಳಿ ಹಾಕಿ ಬೆಂಕಿಯಿಟ್ಟರೆ ದಡಂ ಎಂಬ ಸದ್ದು. ಇದು ದೇಸಿ ಪಟಾಕಿ.