ಬೆಳಗಾವಿ: ನಗರದಲ್ಲಿ ಬುಧವಾರ ಒಂದು ತಾಸು ಜೋರು ಮಳೆ ಬಿದ್ದಿತು. ನಂತರ ಆಗಾಗ ತುಂತುರು ಮಳೆಯಾಯಿತು.
ಸವದತ್ತಿ, ಹಿರೇಬಾಗೇವಾಡಿ, ಕಿತ್ತೂರು, ಅಥಣಿ, ಚಿಕ್ಕೋಡಿ, ಎಂ.ಕೆ. ಹುಬ್ಬಳ್ಳಿ, ಹುಕ್ಕೇರಿ ಹಾಗೂ ಬೈಲಹೊಂಗಲ ಭಾಗದಲ್ಲಿ ಸಾಧಾರಣ ಮಳೆ ಸುರಿಯಿತು.
ನಾಲ್ಕೈದು ದಿನಗಳಿಂದ ಆಗಾಗ ಮಳೆ ಬೀಳುತ್ತಿರುವುದರಿಂದ ಜಿಲ್ಲೆಯ ವಿವಿಧೆಡೆ 8,500 ಹೆಕ್ಟೇರ್ ಸೋಯಾಬೀನ್, ಹತ್ತಿ, ಮೆಕ್ಕೆಜೋಳ, ಕಬ್ಬು ಬೆಳೆಗಳಿಗೆ ಹಾಗೂ 300ಕ್ಕೂ ಹೆಚ್ಚಿನ ಮನೆಗಳಿಗೆ ಹಾನಿಯಾಗಿದೆ. ಸವದತ್ತಿ ತಾಲ್ಲೂಕಿನ ಇನಾಮಹೊಂಗಲ ಬಳಿಯ ಧಾರವಾಡ ಸಂಪರ್ಕಿಸುವ ಸೇತುವೆ ಜಲಾವೃತವಾಗಿದೆ. ಮೂಡಲಗಿ ತಾಲ್ಲೂಕಿನಲ್ಲಿ ಘಟಪ್ರಭಾ ನದಿಗೆ ನಿರ್ಮಿಸಿರುವ ಢವಳೇಶ್ವರ ಮತ್ತು ಅವರಾದಿಯ ಕೆಳಮಟ್ಟದ ಸೇತುವೆಗಳು ಜಲಾವೃತಗೊಂಡಿದ್ದು, ನಾಲ್ಕು ದಿನಗಳಿಂದ ಸಂಚಾರ ಸ್ಥಗಿತವಾಗಿದೆ.