ಬೆಂಗಳೂರು: ಎಂಟು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿನಿಯರನ್ನು ಸಿಐಡಿ ಅಧಿಕಾರಿಗಳು ಕೊನೆಗೂ ಪತ್ತೆ ಹಚ್ಚಿದ್ದಾರೆ.
ವಿದ್ಯಾರಣ್ಯಪುರ ಮೂಲದ ವಿದ್ಯಾರ್ಥಿನಿಯರು ಜನವರಿ 31ರಂದು ನಾಪತ್ತೆಯಾಗಿದ್ದರು. ಇಬ್ಬರು ವಿದ್ಯಾರ್ಥಿನಿಯರ ಪೈಕಿ ಓರ್ವಳು ಸೆಕೆಂಡ್ ಪಿಯುಸಿ ವ್ಯಾಸಂಗ ಮಾಡ್ತಿದ್ದರೆ, ಇನ್ನೊಬ್ಬಳು ಫಸ್ಟ್ ಪಿಯುಸಿ ಓದುತ್ತಿದ್ದಳು. ಸದ್ಯ ಇಬ್ಬರು ಪತ್ತೆಯಾಗಿದ್ದು, ಆ ಪೈಕಿ ಒಬ್ಬಳು ಮದುವೆಯಾಗಿ ಗರ್ಭಿಣಿಯಾಗಿದ್ದಾಳೆ ಎನ್ನುವುದು ಸಿಐಡಿ ತನಿಖೆಯಲ್ಲಿ ಬಯಲಾಗಿದೆ.
ಘಟನೆ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪೋಷಕರು ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯರ ಪತ್ತೆ ಮಾಡಲು ಮುಂದಾಗಿದ್ದರು. ತೀವ್ರ ಹುಡುಕಾಟದ ಬಳಿಕ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದು ಪತ್ತೆಯಾಗಿತ್ತು. ಬೆಟ್ಟದಲ್ಲಿ ವಿದ್ಯಾರ್ಥಿನಿಯರು ಮಗು ಜೊತೆಗೆ ಆಟವಾಡಿದ್ದರು. ಈ ವೇಳೆ ಮಗು ಹಾಗೂ ತಾಯಿ ಆ ಇಬ್ಬರ ಜೊತೆಗೆ ಒಂದು ಸೆಲ್ಫಿ ತೆಗದುಕೊಂಡಿದ್ದರು. ಬಳಿಕ ಸುಳಿವೇ ಇರಲಿಲ್ಲ.
ವಿದ್ಯಾರ್ಥಿನಿಯರು ಪತ್ತೆಯಾಗದೇ ಇದ್ದಾಗ ಕುಟುಂಬಸ್ಥರು ಹೈಕೋರ್ಟ್ಗೆ ಹೋಗಿದ್ದರು. ಐದಾರು ತಿಂಗಳ ಬಳಿಕ ಕೇಸ್ನ್ನು ಹೈಕೋರ್ಟ್ ಸಿಐಡಿಗೆ ವರ್ಗಾವಣೆ ಮಾಡಿತ್ತು.
ಕಳೆದ ಮೂರು ತಿಂಗಳಿಂದ ಸಿಐಡಿ ಹುಡುಕಾಟ ನಡೆಸಿತ್ತು. ಸಿಐಡಿ ಪೊಲೀಸರು ಎಲ್ಲಾ ಕಡೆ ವಿದ್ಯಾರ್ಥಿನಿಯರ ಬಗ್ಗೆ ಮಾಹಿತಿ ತಿಳಿಸುವಂತೆ ಹೇಳಿದ್ದರು. ಇದರ ನಡುವೆ ಸೆಕೆಂಡ್ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಸಿಮ್ ಕಾರ್ಡ್ ಖರೀದಿ ಮಾಡಲು ತೆರಳಿದ್ದಳು. ಈ ವೇಳೆ ಆಧಾರ್ ಕಾರ್ಡ್ ನಂಬರ್ ಬಳಕೆ ಮಾಡಿದಾಗ ಸರ್ವಿಸ್ ಪ್ರೊವೈಡರ್ನಿಂದ ಸಿಐಡಿಗೆ ಮಾಹಿತಿ ಬಂದಿದೆ.
ಮಾಹಿತಿ ಆಧಾರದ ಮೇಲೆ ಸಿಐಡಿ ವಿದ್ಯಾರ್ಥಿನಿಯರನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ವಿದ್ಯಾರ್ಥಿನಿಯರು ಎಲ್ಲಿದ್ದರು ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಇಬ್ಬರಿಗೆ ಬೆಟ್ಟದಲ್ಲಿ ಕನಕಪುರ ತಾಲೂಕಿನ ಓರ್ವ ಯುವಕನ ಪರಿಚಯವಾಗಿತ್ತು. ಆಗ ದೊಡ್ಡವಳು ಮನೆಯಲ್ಲಿನ ಒತ್ತಡಕ್ಕೆ, ಇದು ನನ್ನ ತಂಗಿ, ಅಮ್ಮ, ಅಪ್ಪ ಹಾಗೂ ಕುಟುಂಬಸ್ಥರು ಯಾರೂ ಇಲ್ಲ ಎಂದು ಸುಳ್ಳು ಹೇಳಿದ್ದಳು.
ಆಗ ಇಬ್ಬರು ಯುವಕನ ಜೊತೆಗೆ ಹೋಗಿದ್ದರು. ಬಳಿಕ ದೊಡ್ಡವಳು ಯುವಕನನ್ನು ಮದುವೆಯಾಗಿದ್ದು, ಬಳಿಕ ಒಟ್ಟಿಗೆ ಸಂಸಾರ ನಡೆಸಿಕೊಂಡಿದ್ದರು. ಸದ್ಯ ಆಕೆ ಗರ್ಭಿಣಿಯಾಗಿದ್ದು, ತನಿಖೆ ವೇಳೆ ಹೊರಬಿದ್ದಿದೆ. ಇಂದು ವಿದ್ಯಾರ್ಥಿನಿಯರನ್ನು ಪೊಲೀಸರು ಹೈಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.
Laxmi News 24×7