ಹಾಸನ: ದನದ ಕೊಟ್ಟಿಗೆಯಂತಿರುವ ಎರಡು ಶೆಡ್ಗಳಲ್ಲಿ ವಸತಿ ಶಾಲೆ ನಡೆಸುತ್ತಿದ್ದು ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ನರಕಯಾತನೆ ಅನುಭವಿಸುತ್ತಿರುವ ಘಟನೆ ಹಾಸನ ತಾಲೂಕಿನ, ಶಾಂತಿಗ್ರಾಮದಲ್ಲಿರುವ ಅಂಬೇಡ್ಕರ್ ವಸತಿ ಶಾಲೆಯಲ್ಲಿ ನಡೆದಿದೆ.
92 ಬಾಲಕರು ಹಾಗೂ 80 ಬಾಲಕಿಯರು ಅಕ್ಷರಶಃ ನರಕದಲ್ಲಿ ದಿನ ಕಳೆಯುತ್ತಿದ್ದು, ಅಧಿಕಾರಿಗಳು ಕಂಡು ಕಾಣದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಶಾಲೆಯ ಪ್ರಾಂಶುಪಾಲರು, ವಾರ್ಡನ್ ಹಲವು ಬಾರಿ ಮೇಲಾಧಿಕಾರಿಗಳಿಗೆ ಪತ್ರ ಬರೆದು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
2017ರಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಡುವ ಅಂಬೇಡ್ಕರ್ ವಸತಿ ಶಾಲೆಯನ್ನು ಶಾಂತಿಗ್ರಾಮದ ಬಳಿ ಬಾಡಿಗೆ ಕಟ್ಟಡದಲ್ಲಿ ಆರಂಭಿಸಲಾಯಿತು. ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಾಗುತ್ತಿದ್ದಂತೆ 2021ರಲ್ಲಿ ಸ್ಥಳಾಂತರ ಮಾಡಲಾಯಿತು. ದನದ ಕೊಟ್ಟಿಗೆಗೂ ಕಡೆಯಾಗಿರುವ ಎರಡು ಶೆಡ್ನಲ್ಲಿ ಆರನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಒಟ್ಟು 172 ವಿದ್ಯಾರ್ಥಿಗಳಿದ್ದಾರೆ. ಒಂದು ಶೆಡ್ನಲ್ಲಿ 92 ವಿದ್ಯಾರ್ಥಿಗಳಿದ್ದರೆ, ಮತ್ತೊಂದು ಶೆಡ್ನಲ್ಲಿ 80 ವಿದ್ಯಾರ್ಥಿನಿಯರು ಪಾಠ ಕಲಿಯುತ್ತಿದ್ದಾರೆ. ಒಂದೇ ಜಾಗದಲ್ಲಿ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ತಿಂಡಿ ಊಟ ಮಾಡಿ, ನಂತರ ಸ್ವಚ್ಛಗೊಳಿಸಿ ಅಲ್ಲಿಯೇ ಓದಬೇಕಿದ್ದು, ನಂತರ ಹಾಸಿಗೆಗಳನ್ನು ಹಾಕಿಕೊಂಡು ಎರಡು ಹಾಸಿಗೆಯಲ್ಲಿ ಮೂವರು ವಿದ್ಯಾರ್ಥಿಗಳು ಮಲಗಬೇಕಿದೆ.
92 ವಿದ್ಯಾರ್ಥಿಗಳಿಗಿರುವುದು ಐದೇ ಶೌಚಾಲಯ. ಕಿರಿದಾದ ಮಲಗುವ ಹಾಲ್ನೊಳಗೆ ಪೆಟ್ಟಿಗೆಗಳು, ಇತರೇ ವಸ್ತುಗಳನ್ನು ಇಟ್ಟುಕೊಂಡಿದ್ದರೆ, ಅದರೊಳಗೆ ಶೌಚಾಲಯ, ಅದರ ಪಕ್ಕದಲ್ಲೇ ಅಡುಗೆ ಮನೆಯಿದೆ. ಗಾಳಿ, ಬೆಳಕು ಇಲ್ಲದೆ ಕತ್ತಲೆ ಕೋಣೆಯಲ್ಲಿ ದಯನೀಯ ಸ್ಥಿತಿಯಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಕಲಿಯುತ್ತಿದ್ದಾರೆ.
ಇನ್ನೊಂದೆಡೆ 80 ವಿದ್ಯಾರ್ಥಿನಿಯರು ಆರ್ಸಿಸಿ ಮೇಲೆ ಹಾಕಿರುವ ಶೆಡ್ನಲ್ಲಿ ಒಂದೇ ಕಡೆ ಊಟ, ನಿದ್ರೆ, ಓದಬೇಕಿದೆ. ಒಂದೇ ಕಡೆ ಆರರಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳು ಅಕ್ಕಪಕ್ಕದಲ್ಲಿ ಕುಳಿತು ಪಾಠ ಕಲಿಯಬೇಕಿದೆ. ಪಾಠ ಕಲಿಯುವ ಹೊಂದಿಕೊಂಡಂತೆ ಹೆಣ್ಣುಮಕ್ಕಳ ಶೌಚಾಲಯವಿದೆ. ಆರನೇ ತರಗತಿ ವಿದ್ಯಾರ್ಥಿಗಳ ನೆಲದ ಮೇಲೆ ಕುಳಿತು ಪಾಠ ಕೇಳಬೇಕಿದ್ದು, ಅನಾರೋಗ್ಯದಿಂದ ವಿದ್ಯಾರ್ಥಿನಿಯೊಬ್ಬಳು ಅಲ್ಲೇ ಮಗಲಿದ್ದ ದೃಶ್ಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಯಾಗಿತ್ತು.
ಎರಡು ಶೆಡ್ಗಳಿಗೆ ಪ್ರತಿ ತಿಂಗಳು 1 ಲಕ್ಷದ 8 ಸಾವಿರ ರೂ. ಬಾಡಿಗೆ ಪಾವತಿಸಲಾಗುತ್ತಿದೆ. ಹಾಸ್ಟೆಲ್ನ್ನು ಬೇರೆಡೆಗೆ ಸ್ಥಳಾಂತರ ಮಾಡುವಂತೆ ಅಧಿಕಾರಿಗಳಿಗೆ ಪತ್ರ ಬರೆದರೂ ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ. ಅಲ್ಲಿಯವರೆಗೂ ಕಾಯಿರಿ ಎನ್ನುತ್ತಾ ದಿನದೂಡುತ್ತಿದ್ದು, ಇದರಿಂದಾಗಿ ಶೋಚನೀಯ ಸ್ಥಿತಿಯಲ್ಲಿ ಮಕ್ಕಳು ವಸತಿ ಶಾಲೆಯಲ್ಲಿ ಇರಬೇಕಾದಂತಹ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
Laxmi News 24×7