ಹಾಕಿಯತ್ತ ಯುವಶಕ್ತಿ ಆಸಕ್ತಿ ವಹಿಸಲಿ :ಡಾ.ವೀರಣ್ಣ ಚರಂತಿಮಠ
ಬಾಗಲಕೋಟೆ: ದೇಶೀಯ ಕ್ರೀಡೆಯಾದ ಹಾಕಿಯತ್ತ ಇಂದಿನ ಯುವಶಕ್ತಿ ಹೆಚ್ಚಿನ ಆಸಕ್ತಿ ವಹಿಸಿ, ಕ್ರೀಡೆಯನ್ನು ಪ್ರೋತ್ಸಾಹಿಸಬೇಕು ಎಂದು ಬಿ.ವಿ.ವಿ. ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ಹೇಳಿದರು.
ಅವರು ನಗರದ ಬಿವಿವಿ ಸಂಘದ ಆಟದ ಮೈದಾನದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ಹಾಕಿ ದಿಗ್ಗಜ ಮೇಜರ್ ಧ್ಯಾನಚಂದ್ ಅವರ ಜನ್ಮದಿನದ ಅಂಗವಾಗಿ ಗುರುವಾರ ಬಿವಿವಿ ಸಂಘದ ಸಂಯುಕ್ತ ಆಶ್ರಯದಲ್ಲಿ, ಹಾಕಿ ಹೀರೋಸ್ ಫ್ಯಾನ್ ಬಾಗಲಕೋಟೆ ವತಿಯಿಂದ ಆಯೋಜಿಸಿದ್ದ ೭ಎ ಸೈಡ್ ರಿಂಕ್ ಹಾಕಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದವರು.
ಹಾಕಿ ದೇಶೀಯ ಕ್ರೀಡೆಯಾಗಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಕಿ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಕ್ರೀಡೆಯ ಬೆಳವಣಿಗೆಗೆ ಉತ್ತೇಜನ ನೀಡಬೇಕು. ಬಾಗಲಕೋಟೆಯ ಬಸವೇಶ್ವರ ಕಾಲೇಜು ಮೈದಾನದಲ್ಲಿ ಈ ಹಿಂದೆ ರಾಷ್ಟ್ರಮಟ್ಟದ ಹಾಕಿ ಕ್ರೀಡಾಕೂಟಗಳು ನಡೆದಿವೆ. ಈ ಹಿಂದೆ ನಗರದ ಪ್ರತಿ ಮನೆಗೊಬ್ಬ ಹಾಕಿ ಕ್ರೀಡಾ ಪಟು ಇದ್ದರು, ರಾಜ್ಯದಲ್ಲಿ ಹಾಕಿ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿರುವವರಲ್ಲಿ ಬಾಗಲಕೋಟೆಯವರ ಸಂಖ್ಯೆಯೂ ಹೆಚ್ಚಿನದಾಗಿದೆ. ಸಾಕಷ್ಟು ಜನ ರಾಷ್ಟ್ರೀಯ ಹಾಕಿ ಕ್ರೀಡಾಪಟುಗಳಾಗಿ ಹೊರ ಹೊಮ್ಮಿರುವುದು ಜಿಲ್ಲೆಯ ಹೆಮ್ಮೆಯ ಸಂಗತಿ, ಆದ್ದರಿಂದ ಎಲ್ಲರೂ ಹಾಕಿ ಕ್ರೀಡೆಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಹಾಕಿ ತರಬೇತುದಾರರಾದ ಶರಣ ನಾವಲಗಿ ಹಾಗೂ ಲಾಲಸಾಬ ಮುದ್ದೇಬಿಹಾಳ ಅವರನ್ನು ಸನ್ಮಾನಿಸಲಾಯಿತು.
ಶಾಲಾ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ್, ಬಸವರಾಜ ಹುನಗುಂದ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಜಯ ನಾಯಕ್, ಮಲ್ಲಿಕಾರ್ಜುನ ತಪಶೆಟ್ಟಿ, ಯೋಗಿಶ ಅಬ್ದುಲ್ಪುರ, ವಿಜಯ ಹಿರೇಮಠ,ದೀಪಕ ಬದಾಮಿ, ಮುದಕಪ್ಪ ಚೆಚುವಾದಿ, ಬಸವರಾಜ ಸಜ್ಜನ, ಗುರುಸಿದ್ದ ಹಿರೇಮಠ, ಮಹೇಶ ಗಾಣಗೇರ ಸೇರಿದಂತೆ ಗಣ್ಯರು ಭಾಗವಹಿಸಿದ್ದರು, ಎರಡು ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಯಲ್ಲಿ ಹಿರಿಯರ ವಿಭಾಗದಲ್ಲಿ ೬ ತಂಡ, ಕಿರಿಯರ ವಿಭಾಗದಲ್ಲಿ ೪ ತಂಡ ಸೇರಿ ಒಟ್ಟು ೧೦ ತಂಡಗಳು ಭಾಗವಹಿಸಿವೆ.
Laxmi News 24×7