ಬೆಳಗಾವಿ : ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಬಲಿಷ್ಠ ಸಂಪರ್ಕ ಜಾಲದಿಂದಾಗಿ ತುರ್ತು ಪರಿಸ್ಥಿತಿಯ ಸುವರ್ಣ ಗಳಿಗೆಯಲ್ಲಿಯೇ ತ್ವರಿತ ಚಿಕಿತ್ಸೆ ಒದಗಿಸಲು ಸಾಧ್ಯವಾಗುತ್ತಿದೆ. ಈ ಕಾರ್ಯದಿಂದ ಅನೇಕ ಅಮೂಲ್ಯ ಜೀವಗಳನ್ನು ಉಳಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಕರ್ನಾಟಕ ಆರೋಗ್ಯ ಸಂಜೀವಿನಿ (ಕೆಎಎಸ್ಎಸ್) ಹಾಗೂ ಪಿಎಂ ರಾಹತ್ ಯೋಜನೆಗಳ ಕುರಿತು ಜಿಲ್ಲಾ ಮಟ್ಟದ ಖಾಸಗಿ ಆಸ್ಪತ್ರೆಗಳಿಗಾಗಿ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಗಳಡಿ ಸೇರ್ಪಡೆಯಾಗಿ ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ಮೂಲಕ ಕರ್ನಾಟಕ ಆರೋಗ್ಯ ಸಂಜೀವಿನಿ ಹಾಗೂ ಪಿಎಂ ರಾಹತ್ ಯೋಜನೆಗಳ ಸೌಲಭ್ಯಗಳನ್ನು ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಕುಷ್ಠ್ಠರೋಗ ನಿಯಂತ್ರಣಾಧಿಕಾರಿ ಡಾ.ಗೀತಾ ಕಾಂಬಳೆ ಪ್ರಾಸ್ತಾಪವಿಕವಾಗಿ ಮಾತನಾಡಿದರು. ಕಾರ್ಯಾಗಾರದಲ್ಲಿ ವೈದ್ಯಕೀಯ ಸಲಹೆಗಾರ್ತಿ ಡಾ.ಪರಿಮಳಾ ಮರೂರ, ಚಿಕ್ಕೋಡಿಯ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮಿರಜ ವಿಭಾಗದ ಸಂಯೋಜಕ ಡಾ. ಪ್ರಶಾಂತ ಹೊತ್ತಿಗಿಮಠ ಹಾಗೂ ಶಬ್ನಮ್ ಹವಾಲ್ದಾರ ತಾಂತ್ರಿಕ ಉಪನ್ಯಾಸಗಳನ್ನು ನೀಡಿದರು.
ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಜಗದೀಶ ಗಾಣಗಿ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನ ಪ್ರಾದೇಶಿಕ ಸಮಾಲೋಚಕ ಡಾ.ನವೀದ ಅಹ್ಮದ್ ಶೇಖ್, ಭಾರತೀಯ ವೈದ್ಯಕೀಯ ಸಂಘದ ಬೆಳಗಾವಿ ಘಟಕದ ಅಧ್ಯಕ್ಷ ಡಾ.ಹೇಮಂತ ಕೌಜಲಗಿ, ಪ್ರಧಾನ ಕಾರ್ಯದರ್ಶಿ ಡಾ.ರಾಘವೇಂದ್ರ ಸಾಗರ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ರಾಯಗೋಳ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎ.ಕುಂಬಾರ ಇತರರಿದ್ದರು.
Laxmi News 24×7