ಬೆಂಗಳೂರು: ಪಿಎಂ ಕೇರ್ಸ್ ದೇಶದ ಅತಿದೊಡ್ಡ ಸಾಂಸ್ಥಿಕ ಹಗರಣಗಳಲ್ಲಿ ಒಂದು ಹಾಗೂ ಪ್ರಧಾನಿ ಮೋದಿ ಸರ್ಕಾರದಿಂದ ಸಾರ್ವಜನಿಕ ನಂಬಿಕೆಗೆ ಮಾಡಿರುವ ದ್ರೋಹವಾಗಿದೆ ಎಂದು ರಾಜ್ಯ ಗೃಹಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಕೋವಿಡ್ನಂತಹ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು 2020ರಲ್ಲಿ ಸ್ಥಾಪಿಸಲಾದ ಪಿಎಂ ಕೇರ್ಸ್ (PM CARES) ನಿಧಿಯಲ್ಲಿ ಸದ್ಯ ಒಟ್ಟು 8,452 ಕೋಟಿ ರೂ. ಹಣವಿರುವುದು ಇತ್ತೀಚಿನ ಆಡಿಟ್ ವರದಿ ತಿಳಿಸಿದೆ. ಈ ಬಗ್ಗೆ ಎಕ್ಸ್ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸಚಿವರು ಪ್ರತಿಕ್ರಿಯಿಸಿದ್ದು, ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಎಕ್ಸ್ ಪೋಸ್ಟ್ನಲ್ಲಿ ಏನಿದೆ?
ಪಿಎಂ ಕೇರ್ಸ್ ದೇಶದ ಅತಿದೊಡ್ಡ ಸಾಂಸ್ಥಿಕ ಹಗರಣಗಳಲ್ಲಿ ಒಂದು ಹಾಗೂ ಪ್ರಧಾನಿ ಮೋದಿ ಸರ್ಕಾರದಿಂದ ಸಾರ್ವಜನಿಕ ನಂಬಿಕೆಗೆ ಮಾಡಿರುವ ದ್ರೋಹವಾಗಿದೆ. ತುರ್ತು ಪರಿಹಾರದ ಹೆಸರಿನಲ್ಲಿ ದೇಶೀಯ ಹಾಗೂ ವಿದೇಶಿ ದಾನಿಗಳಿಂದ ಹಣ ಸಂಗ್ರಹಿಸುತ್ತಿರುವ ಮೋದಿ ಸರ್ಕಾರ, ಅಗತ್ಯವಿರುವ ಸಂದರ್ಭದಲ್ಲಿ ಆ ಹಣವನ್ನು ಖರ್ಚು ಮಾಡುವ ಉದ್ದೇಶವೇ ಇಲ್ಲದಿದ್ದರೆ ಏಕೆ ಸಂಗ್ರಹಿಸುತ್ತಿದೆ?
2024-25ನೇ ಸಾಲಿನ PM CARES ನಿಧಿಯ ಆಡಿಟ್ ವರದಿಯ ಪ್ರಕಾರ, 8,452 ಕೋಟಿ ರೂ. ಲಭ್ಯವಿದ್ದರೂ, ಅದರಲ್ಲಿ ಕೇವಲ ಶೇ.0.01ರಷ್ಟು ಹಣವನ್ನು ಮಾತ್ರ ಬಳಸಲಾಗಿದೆ. 324 ಕೋಟಿ ರೂ. ಹಣವನ್ನು ಅನುಷ್ಠಾನಗೊಳಿಸುವ ಸಂಸ್ಥೆಗಳು ಹಿಂದಿರುಗಿಸಿರುವುದಾಗಿ ದಾಖಲಾಗಿದ್ದು, ಆ ಸಂಸ್ಥೆಗಳು ಯಾವುವು? ಹಣವನ್ನು ಏಕೆ ಹಿಂದಿರುಗಿಸಲಾಯಿತು? ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.
ಇದಕ್ಕಿಂತಲೂ ಅನುಮಾನಾಸ್ಪದ ಸಂಗತಿಯೆಂದರೆ, ಹಣಕಾಸು ಹೇಳಿಕೆಗೆ ಸಂಬಂಧಿಸಿದ ಟಿಪ್ಪಣಿಗಳನ್ನು ಕೂಡ ಬಹಿರಂಗಪಡಿಸಲಾಗಿಲ್ಲ.
2020ರ ಮಾರ್ಚ್ನಲ್ಲಿ ತುರ್ತು ಪರಿಸ್ಥಿತಿಗಳು ಮತ್ತು ಸಂಕಷ್ಟದ ಸಂದರ್ಭಗಳನ್ನು ನಿಭಾಯಿಸುವ ಉದ್ದೇಶದಿಂದ PM CARES ನಿಧಿಯನ್ನು ಸ್ಥಾಪಿಸಲಾಯಿತು. ಆದರೆ ಅದರ ನಂತರ ಭಾರತವು ಕೋವಿಡ್ ಮಹಾಮಾರಿಯ ಭೀಕರತೆಯನ್ನ ಕಂಡಿದೆ. ಹಲವು ದೊಡ್ಡ ಚಂಡಮಾರುತಗಳು, ಕೇರಳ ಮತ್ತು ಹಿಮಾಚಲ ಪ್ರದೇಶದಂತಹ ರಾಜ್ಯಗಳಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹಗಳು ಹಾಗೂ ಇದೀಗ ದೇಶದ ಹಲವು ಭಾಗಗಳಲ್ಲಿ ತೀವ್ರ ಬರ ಮತ್ತು ಸಂಕಷ್ಟದ ಪರಿಸ್ಥಿತಿಯನ್ನೂ ಎದುರಿಸುತ್ತಿದೆ. ಜನರು ಸಂಕಷ್ಟದಲ್ಲಿರುವಾಗ, ಪರಿಹಾರಕ್ಕಾಗಿ ಮೀಸಲಿಟ್ಟ ಹಣವನ್ನು ಬಳಸದೇ ಇರುವುದು ನಿಜಕ್ಕೂ ಕ್ರೂರವಾದ ನಡೆ.
Laxmi News 24×7