ಬೆಂಗಳೂರು: ನಾನು ಹಿಂದೂಸ್ತಾನಿ, ನಾನು ಕನ್ನಡಿಗ, ದೇಶದ ಅಭಿಮಾನವನ್ನ ಬಿಜೆಪಿಯವರಿಂದ ಕಲಿಯಬೇಕಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ವಿಪಕ್ಷಗಳಿಗೆ ತಿರುಗೇಟು ನೀಡಿದರು.
ಸ್ವಕ್ಷೇತ್ರ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಪಾಲ್ಗೊಂಡಿದ್ದರು. ಬೆಂಗಳೂರು ದಕ್ಷಿಣ ಎಸಿ ವಿಶ್ವನಾಥ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀರ್ ʻವಿಜಯನಗರ ಜಿಲ್ಲೆಯಲ್ಲಿ ಧ್ವಜಾರೋಹಣಕ್ಕೆ ವಿನಾಯ್ತಿ ಕೋರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ವಿಚಾರʼಕ್ಕೆ ಪ್ರತಿಕ್ರಿಯಿಸಿದರು.
ಧ್ವಜಾರೋಹಣ ಮಾಡೋದು ಸೌಭಾಗ್ಯ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೂ ಧ್ವಜಾರೋಹಣ ಮಾಡಲು ಅವಕಾಶ ಸಿಕ್ಕಿತ್ತು. 2 ವರ್ಷ ಬಳ್ಳಾರಿ ಉಸ್ತುವಾರಿಯಾಗಿದ್ದೆ, ಸಿದ್ದರಾಮಯ್ಯ ಅವರು ಇದ್ದಾಗಲೂ ಜಿಲ್ಲಾ ಉಸ್ತುವಾರಿ ಬೇಡ ಅಂದಿದ್ದೆ. ಡಿಕೆ ಶಿವಕುಮಾರ್ ಅವ್ರಿಗೂ ಹೇಳಿದ್ದೆ. ಕೆಲಸದ ಒತ್ತಡದಿಂದ ಬಸಂತಪ್ಪ ಅವರಿಗೆ ಅವಕಾಶ ಕೊಡಲು ಹೇಳಿದ್ದೆ ಅಷ್ಟೆ ಎಂದು ಸ್ಪಷ್ಟಪಡಿಸಿದರು.
ಮಂತ್ರಿ ಆದ್ಮೇಲೆ ಧ್ವಜಾರೋಹಣ ಮಾಡಬೇಕು ಅಂತ ಆಸೆ ಇರುತ್ತೆ. 2006 ಕುಮಾರಸ್ವಾಮಿ ಸರ್ಕಾರದಲ್ಲಿ ಮಂತ್ರಿ ಆಗಿದ್ದೆ. ದೇಶದ್ರೋಹಿ ಯಾರಿದ್ದಾರೆ ಅಂತ ಇದಾರೆ ಜನಕ್ಕೆ ಗೊತ್ತು. ದೇಶಾಭಿಮಾನ ಬಿಜೆಪಿಯವರಿಂದ ಕಲಿಯಬೇಕಿಲ್ಲ. ಸ್ವಾತಂತ್ರ್ಯ ಯಾರಿಂದ ಬಂದಿದೆ ಅಂತ ದೇಶಕ್ಕೆ ಗೊತ್ತು. ಅವ್ರಿಂದ ನಾನು ಕಲಿಯಲ್ಲ, ನಾನು ಹಿಂದೂಸ್ತಾನಿ, ನಾನು ಕನ್ನಡಿಗ ಎಂದು ಹೇಳಿದರು.
Laxmi News 24×7