Breaking News

ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆ. 1ರಂದು 16ನೇ ಪದವಿ ಪ್ರದಾನ ಸಮಾರಂಭ

Spread the love

ಬಾಗಲಕೋಟೆ: ನಗರದ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ 2024–25ನೇ ಸಾಲಿನ ವಿದ್ಯಾರ್ಥಿಗಳಿಗಾಗಿ ೧೬ನೇ ಪದವಿ ಪ್ರದಾನ ಸಮಾರಂಭವನ್ನು ಆಗಸ್ಟ್ 1ರಂದು ಶನಿವಾರ ಮಧ್ಯಾಹ್ನ 4 ಗಂಟೆಗೆ ಕಾಲೇಜಿನ ನೂತನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಕರ್ನಾಟಕದ ಪ್ರತಿಷ್ಠಿತ ಬಿವಿವಿ ಸಂಘದ ವಿದ್ಯಾಸಂಸ್ಥೆಯಾದ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು 63 ವರ್ಷಗಳ ಶೈಕ್ಷಣಿಕ ಪಯಣವನ್ನು ಯಶಸ್ವಿಯಾಗಿ ಪೂರೈಸಿದ್ದು, ದೇಶದ ಪ್ರಮುಖ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಕಾಲೇಜು 2007ರಲ್ಲಿ ಯುಜಿಸಿ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಶೈಕ್ಷಣಿಕ ಸ್ವಾಯತ್ತತೆಯನ್ನು ಪಡೆದುಕೊಂಡಿದೆ. ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಕಾಲೇಜು ಎನ್‌ಬಿಎ, ನ್ಯಾಕ್ ಹಾಗೂ ಎನ್‌ಐಆರ್‌ಎಫ್ ಸೇರಿದಂತೆ ವಿವಿಧ ಮಾನ್ಯತೆಗಳನ್ನು ಪಡೆದುಕೊಂಡಿದ್ದು, ವಿಶ್ವಬ್ಯಾಂಕ್ ಯೋಜನೆಯಡಿ ಟೆಕ್ಯೂಪ್‌ನಿಂದ ಆರ್ಥಿಕ ನೆರವು ಪಡೆದು ಶೈಕ್ಷಣಿಕ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಪವನಶಕ್ತಿ ಕ್ಷೇತ್ರದಲ್ಲಿನ ಸಾಧನೆಗಾಗಿ ಭಾರತ ಸರ್ಕಾರದಿಂದಲೂ ಪ್ರಶಂಸೆ ಹಾಗೂ ಪ್ರಶಸ್ತಿಗೆ ಭಾಜನವಾಗಿದೆ.

ಪದವಿ ಪ್ರದಾನ ಸಮಾರಂಭಕ್ಕೆ ಬೆಂಗಳೂರಿನ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ನಿರ್ದೇಶಕರಾದ ಪ್ರೊ. ದೆಬಬ್ರತ ದಾಸ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಪದವಿ ಪ್ರದಾನ ಮಾಡಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.

ಬೆಂಗಳೂರು ಕಲ್ಪತರು ಪ್ರಾಜೆಕ್ಟ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ ದಕ್ಷಿಣ ಭಾರತ ಕಾರ್ಯಾಚರಣೆ ವಿಭಾಗದ ವ್ಯವಹಾರ ಮುಖ್ಯಸ್ಥ ಜಿ. ಎಂ. ಶಾಂತಕುಮಾರ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್. ಅಥಣಿ, ಬಿವಿವಿ ಸಂಘದ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ. ಆರ್. ಎನ್. ಹೆರಕಲ್, ಕಾಲೇಜಿನ ಪ್ರಾಚಾರ್ಯ ಡಾ. ಬಿ. ಆರ್. ಹಿರೇಮಠ ಹಾಗೂ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಕೆ. ಚಂದ್ರಶೇಖರ ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ.

2024–25ನೇ ಸಾಲಿನಲ್ಲಿ ನಾಲ್ಕು ವಿಭಾಗಗಳ 17 ವಿದ್ಯಾರ್ಥಿಗಳಿಗೆ ಬಿ.ಇ. ಆನರ್ಸ್ ಪದವಿ, ೧೧ ವಿಭಾಗಗಳ 618 ವಿದ್ಯಾರ್ಥಿಗಳಿಗೆ ಬಿ.ಇ. ಪದವಿ ಹಾಗೂ ಮೂರು ಸ್ನಾತಕೋತ್ತರ ವಿಭಾಗಗಳ 129 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಹೀಗೆ ಒಟ್ಟು 764 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ.
ಬಿ.ಇ. ವಿಭಾಗದಲ್ಲಿ ಒಟ್ಟು 23 ರ‍್ಯಾಂಕ್‌ಗಳನ್ನು ನೀಡಲಾಗಿದ್ದು, ಎಂಟು ವಿದ್ಯಾರ್ಥಿಗಳು ಪ್ರಥಮ ರ‍್ಯಾಂಕ್‌ನೊಂದಿಗೆ 12 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಸ್ನಾತಕೋತ್ತರ ವಿಭಾಗದಲ್ಲಿ ಏಳು ರ‍್ಯಾಂಕ್‌ಗಳನ್ನು ನೀಡಲಾಗಿದ್ದು, ಮೂವರು ವಿದ್ಯಾರ್ಥಿಗಳು ಪ್ರಥಮ ರ‍್ಯಾಂಕ್‌ನೊಂದಿಗೆ ಮೂರು ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣ ಪ್ರೇಮಿಗಳು ಹಾಗೂ ಶಿಕ್ಷಣ ತಜ್ಞರು ಚಿನ್ನದ ಪದಕ ಮತ್ತು ನಗದು ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಿದ್ದಾರೆ.

ಪದವಿ ಪಡೆಯುತ್ತಿರುವ ಎಲ್ಲ ವಿದ್ಯಾರ್ಥಿಗಳನ್ನು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ಶ್ರೀ ಮಹೇಶ ಎನ್. ಅಥಣಿ, ಆಡಳಿತ ಮಂಡಳಿ ಸದಸ್ಯರು, ತಾಂತ್ರಿಕ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ. ಆರ್. ಎನ್. ಹೆರಕಲ್, ಪ್ರಾಚಾರ್ಯ ಡಾ. ಬಿ. ಆರ್. ಹಿರೇಮಠ ಹಾಗೂ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಕೆ. ಚಂದ್ರಶೇಖರ ಅಭಿನಂದಿಸಿ, ಅವರ ಮುಂದಿನ ವೃತ್ತಿಪರ ಜೀವನವು ಯಶಸ್ಸು ಮತ್ತು ಶ್ರೇಯೋಭಿವೃದ್ಧಿಯಿಂದ ಕೂಡಿರಲಿ ಎಂದು ಹಾರೈಸಿದ್ದಾರೆ.


Spread the love

About Laxminews 24x7

Check Also

ಯೋಗೇಶ್ ಗೌಡ ಕೊಲೆ ಕೇಸಲ್ಲಿ ವಿನಯ್ ಕುಲಕರ್ಣಿಗೆ ಬಿಗ್‌ ರಿಲೀಫ್‌ – ಜಾಮೀನು ಮಂಜೂರು

Spread the loveಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಬಿಜೆಪಿ ಮುಖಂಡ ಯೋಗೇಶ್ ಗೌಡ  ಕೊಲೆ ಕೇಸಲ್ಲಿ ಮಾಜಿ ಸಚಿವ ವಿನಯ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ