ನವದೆಹಲಿ: ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ವಕ್ತಾರಾಗಿದ್ದ ಶೆಹಜಾದ್ ಪೂನಾವಾಲಾ ಪಕ್ಷಕ್ಕೆ ಗುಡ್ಬೈ ಹೇಳಿದ್ದಾರೆ.
ತಮ್ಮ ‘X’ ಖಾತೆಯ ಬಯೋ ಬದಲಾಯಿಸಿಕೊಂಡಿದ್ದು, ‘ಬಿಜೆಪಿ ರಾಷ್ಟ್ರೀಯ ವಕ್ತಾರ’ ಎಂಬ ಹುದ್ದೆಯ ಹೆಸರನ್ನು ತೆರವುಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಅವರು ಸಕ್ರಿಯ ರಾಜಕೀಯದಿಂದ ಹೊರನಡೆಯುತ್ತಾರೆಯೇ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆ ಆರಂಭವಾಗಿದೆ.
ಬಯೋದಲ್ಲಿ ಏನಿದೆ?
ಗುರುವಾರ ತಮ್ಮ ಪರಿಷ್ಕೃತ X ಪ್ರೊಫೈಲ್ನ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದ 38 ವರ್ಷದ ಪೂನಾವಾಲಾ, “ನನ್ನ ನವೀಕರಿಸಿದ ಬಯೋ” ಎಂದು ಬರೆದುಕೊಂಡಿದ್ದರು. ಆ ನವೀಕೃತ ವಿವರಣೆಯಲ್ಲಿ “ಧರ್ಮ: ಇಸ್ಲಾಂ, ಸಂಸ್ಕೃತಿ: ಹಿಂದೂ, ಸಿದ್ಧಾಂತ: ಭಾರತೀಯ. ಲೇಖಕ: ಜಿಎಸ್ಟಿ ಕಿ ಯಾತ್ರಾ; ಪ್ರಧಾನಿ ನರೇಂದ್ರ ಮೋದಿ ಅವರ ಅನುಯಾಯಿ” ಎಂದು ಅಪ್ಡೇಟ್ ಮಾಡಿದ್ದರು.
ಬಯೋ ಬದಲಾಯಿಸಿದ ಬೆನ್ನಲ್ಲೇ ಪೂನಾವಾಲಾ ತಮ್ಮ ಹಳೆಯ ಎರಡು ವಿಡಿಯೊ ಸಂದರ್ಶನಗಳ ತುಣುಕುಗಳನ್ನು ಮರುಹಂಚಿಕೊಂಡಿದ್ದಾರೆ. ಆ ವಿಡಿಯೊಗಳಲ್ಲಿ ಅವರು, ರಾಜಕೀಯ ಮತ್ತು ಚುನಾವಣಾ ಹುದ್ದೆಗಳನ್ನು ಹೊರತುಪಡಿಸಿಯೂ ಸಮಾಜ ಸೇವೆ ಮಾಡಬಹುದು. ಚುನಾವಣೆಯಲ್ಲಿ ಸ್ಪರ್ಧಿಸುವುದು ಅಥವಾ ಜನಪ್ರತಿನಿಧಿಯಾಗುವುದು ಮಾತ್ರವೇ ಸಮಾಜ ಸೇವೆಯಲ್ಲ ಎಂದು ಹೇಳಿದ್ದರು.
ಮತ್ತೊಂದು ವಿಡಿಯೊದಲ್ಲಿ, “2024ರ ಲೋಕಸಭೆ ಚುನಾವಣೆ ಮುಗಿದ ತಕ್ಷಣವೇ ಸಕ್ರಿಯ ರಾಜಕೀಯದಿಂದ ಹೊರನಡೆಯಲು ನಿರ್ಧರಿಸಿದ್ದೆ. ಆದರೆ ಪ್ರಧಾನಿ ಮೋದಿಯವರ ಭಾವುಕ ಕ್ಷಣಗಳು ಹಾಗೂ ದೆಹಲಿ, ಹರಿಯಾಣ, ಮಹಾರಾಷ್ಟ್ರ, ಬಂಗಾಳ ಮುಂತಾದ ಪ್ರಮುಖ ರಾಜ್ಯಗಳ ಚುನಾವಣೆಗಳು ಎದುರಿಗಿದ್ದ ಕಾರಣ ಪಕ್ಷಕ್ಕಾಗಿ ಶ್ರಮಿಸಲು ಮುಂದುವರಿದೆ. ಈಗ ಸಕ್ರಿಯ ರಾಜಕೀಯದಿಂದ ದೂರ ಸರಿಯುವ ಸಮಯ ಬಂದಿದೆ ಎಂದು ಪೂನಾವಾಲಾ ವಿವರಿಸಿದ್ದರು. ಈ ವಿಡಿಯೊ ಹಂಚಿಕೊಳ್ಳುವಾಗ ಈಗಾಗಲೇ 2 ವರ್ಷ ತಡವಾಗಿದೆ ಎಂಬ ಅಡಿಬರಹವನ್ನೂ ಬರೆದುಕೊಂಡಿದ್ದಾರೆ.
ವೃತ್ತಿಯಲ್ಲಿ ವಕೀಲ ಮತ್ತು ಕಾರ್ಯಕರ್ತರಾಗಿರುವ ಶೆಹಜಾದ್ ಪೂನಾವಾಲಾ, ಆರಂಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿದ್ದರು. 2017 ರಲ್ಲಿ ಕಾಂಗ್ರೇಸ್ ಪಕ್ಷದ ಅಧ್ಯಕ್ಷೀಯ ಚುನಾವಣೆ ಹಾಗೂ ವಂಶಪಾರಂಪರ್ಯ ರಾಜಕೀಯದ ವಿರುದ್ಧ ಬಹಿರಂಗವಾಗಿ ಬಂಡಾಯವೆದ್ದು ಸುದ್ದಿಯಾದರು. ಆ ನಂತರ ಬಿಜೆಪಿಗೆ ಸೇರ್ಪಡೆಯಾದ ಅವರಿಗೆ ಪಕ್ಷವು ರಾಷ್ಟ್ರೀಯ ವಕ್ತಾರ ಹೊಣೆಗಾರಿಕೆಯನ್ನು ನೀಡಿತ್ತು. ಮಾಧ್ಯಮ ಚರ್ಚೆಗಳಲ್ಲಿ ಬಿಜೆಪಿಯ ಪ್ರಬಲ ಧ್ವನಿಯಾಗಿ ಗುರುತಿಸಿಕೊಂಡಿದ್ದ ಪೂನಾವಾಲಾ ಅವರ ಈ ದಿಢೀರ್ ನಡೆ ಇದೀಗ ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
Laxmi News 24×7