ವಿದ್ಯಾರ್ಥಿಗಳಿಂದ ಗುರುವಿನ ಮಹತ್ವ ಸಾರುವ ಸೊಗಸಾದ ನೃತ್ಯ ಪ್ರದರ್ಶನ
ಬಾಗಲಕೋಟೆ: ನಮ್ಮ ಜೀವನದ ಜ್ಞಾನಯಾನಕ್ಕೆ ದೀಪ ಹಚ್ಚಿ, ಬದುಕಿನ ಪಯಣದಲ್ಲಿ ಮಾರ್ಗದರ್ಶನ ನೀಡಿ ಜೊತೆ ನಿಲ್ಲುವವರೇ ಗುರುಗಳು. ಗುರು ಎಂದರೆ ಕೇವಲ ಅಕ್ಷರ ಜ್ಞಾನವನ್ನು ಕಲಿಸುವವರಲ್ಲ; ಜೀವನದ ಏಳುಬೀಳುಗಳಲ್ಲಿ ಸೂಕ್ತ ಮಾರ್ಗದರ್ಶನ ನೀಡಿ, ಸನ್ಮಾರ್ಗದಲ್ಲಿ ಮುನ್ನಡೆಸುವವರೂ ಗುರುಗಳೇ ಆಗಿದ್ದಾರೆ ಎಂದು ಬಸವೇಶ್ವರ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯ ಪ್ರಾಚಾರ್ಯೆ ಮಂಗಳಗೌರಿ ಹೆಗ್ಡೆ ಹೇಳಿದರು.
ಬುಧವಾರ ವಿದ್ಯಾಗಿರಿಯ ಬಸವೇಶ್ವರ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ಗುರು ಪೂರ್ಣಿಮೆಯ ಅಂಗವಾಗಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಜೀವನದಲ್ಲಿ ಗುರುಗಳನ್ನು ಸದಾ ಗೌರವಿಸಿ ಸ್ಮರಿಸಬೇಕು. ಇದರಿಂದ ಗುರು–ಶಿಷ್ಯರ ಸಂಬAಧದ ಮೌಲ್ಯ ಮತ್ತಷ್ಟು ಗಟ್ಟಿಯಾಗುತ್ತದೆ. ನಮ್ಮ ಗುರಿಗಳನ್ನು ಸಾಧಿಸಲು ಒಬ್ಬ ಉತ್ತಮ ಗುರುವಿನ ಮಾರ್ಗದರ್ಶನ ಅಗತ್ಯ ಎಂಬ ಮಾತು ಅಕ್ಷರಶಃ ಸತ್ಯವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನದಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಉಜ್ವಲ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಶಾಲಾ ಶಿಕ್ಷಣ ವಿಭಾಗದ ನಿರ್ದೇಶಕ ಸುರೇಶ ಹೆಗ್ಡೆ, ಗುರುಗಳೆಂದರೆ ಕೇವಲ ವಿದ್ಯೆ ಕಲಿಸುವ ಶಿಕ್ಷಕರಷ್ಟೇ ಅಲ್ಲ. ಮನೆಯಲ್ಲಿರುವ ಹೆತ್ತವರು, ಪೋಷಕರು ಹಾಗೂ ನಮ್ಮ ಸರಿ–ತಪ್ಪುಗಳನ್ನು ತಿದ್ದಿ ಸರಿದಾರಿಯಲ್ಲಿ ಮುನ್ನಡೆಸುವ ಪ್ರತಿಯೊಬ್ಬ ವ್ಯಕ್ತಿಯೂ ಗುರುವೇ ಆಗಿದ್ದಾರೆ, ಗುರುಗಳ ಆಶೀರ್ವಾದವು ನಮ್ಮ ಜೀವನದ ದಾರಿದೀಪವಾಗಬೇಕು. ಜ್ಞಾನ, ಸಂಸ್ಕಾರ ಹಾಗೂ ಸನ್ಮಾರ್ಗವನ್ನು ತೋರಿಸುವ ಪ್ರತಿಯೊಬ್ಬರೂ ಗುರು ಸ್ಥಾನಕ್ಕೆ ಅರ್ಹರಾಗಿದ್ದಾರೆ ಎಂದು ತಿಳಿಸಿದ ಅವರು, ಗುರು ಸ್ಥಾನದಲ್ಲಿರುವ ಎಲ್ಲರಿಗೂ ಗುರು ಪೂರ್ಣಿಮೆಯ ಶುಭಾಶಯಗಳನ್ನು ಕೋರಿದರು.
ಶಾಲೆಯ ಪ್ರಾರ್ಥನಾ ಸಭೆಯಲ್ಲಿ ಶ್ರೀ ಬೀಳೂರು ಗುರುಬಸವ ಗುರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಗುರುವಿನ ಮಹತ್ವವನ್ನು ಸಾರುವ ಸೊಗಸಾದ ನೃತ್ಯ ಪ್ರದರ್ಶನಗಳು ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು.ಈ ಸಂದರ್ಭದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಶಿಕ್ಷಕರಿಗೂ ವಿದ್ಯಾರ್ಥಿಗಳು ಗುರು ಪೂರ್ಣಿಮೆಯ ಶುಭಾಶಯಗಳನ್ನು ಕೋರಿದರು.
Laxmi News 24×7