ನವದೆಹಲಿ: ಲೋಕಸಭೆಯಲ್ಲಿ ಪೇಪರ್ ಲೀಕ್ ಅಕ್ರಮ ತಡೆ ತಿದ್ದುಪಡಿ ಮಸೂದೆ ಚರ್ಚೆ ವೇಳೆ ವಿಪಕ್ಷ ನಾಯಕ, ಸಂಸದ ರಾಹುಲ್ ಗಾಂಧಿ ಬಳಸಿದ ʻಇಡಿಯಟ್ʼ (ಮೂರ್ಖ) ಹಾಗೂ ʻಅಂಧಭಕ್ತʼ ಪದಗಳು ತೀವ್ರ ವಿವಾದಕ್ಕೆ ಕಾರಣವಾಯಿತು. ಆಡಳಿತ ಪಕ್ಷದ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಕಲಾಪದಲ್ಲಿ ಭಾರೀ ಗದ್ದಲ – ಕೋಲಾಹಲ ಉಂಟಾಯಿತು. ಈ ವೇಳೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ವಿಷಯಕ್ಕೆ ಸೀಮಿತವಾಗಿ ಮಾತನಾಡಿ ಎಂದು ರಾಹುಲ್ ಗಾಂಧಿಗೆ ಸೂಚನೆ ನೀಡಿದರು.
ಲೋಕಸಭೆಯಲ್ಲಿಂದು ತಮ್ಮ ಭಾಷಣ ಮಾಡಿದ ರಾಹುಲ್ ಗಾಂಧಿ, ವಿದ್ಯಾರ್ಥಿಯೊಬ್ಬರ ಭಾಷಣ ಉಲ್ಲೇಖಿಸಿ, ʻವಿದ್ಯಾರ್ಥಿಗಳು, ಮೂರ್ಖರು, ಅಂಧಭಕ್ತರುʼ ಎಂಬ ಮೂರು ವರ್ಗದ ಜನರಿದ್ದಾರೆ ಎಂದು ಹೇಳಿದರು. 18 ವರ್ಷದ ವಿದ್ಯಾರ್ಥಿ ಹೇಳ್ತಾನೆ ʻವಿದ್ಯಾರ್ಥಿಗಳುʼ ಎಂದರೆ ಜ್ಞಾನವನ್ನು ಬಯಸುವವರು, ಇತರರ ಮಾತುಗಳನ್ನ ಕೇಳಲು ಸಿದ್ಧರಿರುವವರು, ʻಮೂರ್ಖರುʼ ಎಂದರೆ ವಿಭಿನ್ನ ಅಭಿಪ್ರಾಯಗಳನ್ನ ಕೇಳಲು ನಿರಾಕರಿಸುವವರು ಎಂದು ಬಣ್ಣಿಸಿದರು.
ಈ ವೇಳೆ ಆಡಳಿತ ಪಕ್ಷದ ಸದಸ್ಯರು ತೀವ್ರ ಗದ್ದಲ ಸೃಷ್ಟಿಸಿದ್ರು. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹಾಗೂ ಆಡಳಿತ ಪಕ್ಷದ ಸದಸ್ಯರು ರಾಹುಲ್ ಗಾಂಧಿ ಬಳಸಿದ ʻಇಡಿಯಟ್ʼ ಮತ್ತು ʻಅಂಧಭಕ್ತʼ ಪದಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು. ʻಅಸಂಸದೀಯʼ ಪದಗಳನ್ನ ತೆಗೆದುಹಾಕಬೇಕೆಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ತಾನು ಯಾರ ಹೆಸರನ್ನೂ ಉಲ್ಲೇಖಿಸಿಲ್ಲ, ಕೇವಲ ವಿದ್ಯಾರ್ಥಿಯ ವ್ಯಾಖ್ಯಾನವನ್ನಷ್ಟೇ ವಿವರಿಸುತ್ತಿದ್ದೇನೆ. ಈ ಪದಗಳು ಸರ್ಕಾರವನ್ನ ಉದ್ದೇಶಿಸಿ ಹೇಳಿದ್ದಲ್ಲ. ಸಂಸದರನ್ನು ಉದ್ದೇಶಿಸಿ ಹೇಳಿದ್ರೆ ಮಾತ್ರ ಅದು ಅಸಂಸದೀಯವಾಗುತ್ತದೆ. ಅಗತ್ಯವಿದ್ದರೆ ಅವುಗಳನ್ನ ಸದನದ ದಾಖಲೆಯಿಂದ ತೆಗೆದುಹಾಕುವಂತೆ ಸ್ಪೀಕರ್ಗೆ ಮನವಿ ಮಾಡಿದರು.
ಆದಾಗ್ಯೂ ಸದನದಲ್ಲಿ ಆಡಳಿತ ಪಕ್ಷದ ಸದಸ್ಯರು ಗದ್ದಲ ಮುಂದುವರಿಸಿದ ಹಿನ್ನೆಲೆ ಕಲಾಪವನ್ನ ಮಧ್ಯಾಹ್ನ 2:30 ಗಂಟೆಗೆ ಮುಂದೂಡಲಾಯಿತು.
Laxmi News 24×7