ಬೆಂಗಳೂರು: ಬೆಂಗಳೂರು ಉತ್ತರ ಪಾಲಿಕೆಯ ಸ್ವಚ್ಛ ಭಾರತ ಅಭಿಯಾನದಡಿ ನಗರದ 100 ಬ್ಲಾಕ್ ಸ್ಪಾಟ್ನ್ನು ಸಂಪೂರ್ಣ ಸ್ವಚ್ಛಗೊಳಿಸಲಾಗಿದ್ದು, ಸ್ಥಳೀಯರು ಅದೇ ಜಾಗದಲ್ಲಿ ಕಬ್ಬಡಿ ಆಡಿ ಸಂಭ್ರಮಿಸಿದ್ದಾರೆ.
ಥಣಿಸಂದ್ರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಭಾಗವಹಿಸಿದರು. ಸ್ವಚ್ಛಗೊಳಿಸಿದ ಜಾಗದಲ್ಲಿ ಸಚಿವರು ಸ್ವತಃ ಗೋಡೆಗೆ ಪೇಂಟಿಂಗ್ ಮಾಡಿ, ಗಿಡಗಳನ್ನು ನೆಡುವ ಮೂಲಕ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು.
ಜೂ. 15ರಿಂದ ಬೆಂಗಳೂರು ಉತ್ತರ ಪಾಲಿಕೆ ಬ್ಲಾಕ್ ಸ್ಪಾಟ್ಗಳನ್ನು ಗುರುತಿಸಿ ಸ್ವಚ್ಛಗೊಳಿಸುವ ಕೆಲಸ ಆರಂಭಿಸಿತ್ತು. ಈಗಾಗಲೇ 100 ಕ್ಕೂ ಹೆಚ್ಚು ಕಸದ ತಾಣಗಳನ್ನು ಸ್ವಚ್ಛಗೊಳಿಸಲಾಗಿದೆ. ಹಲವು ಕಡೆ ಕಸದ ರಾಶಿ ಇದ್ದ ಸ್ಥಳಗಳನ್ನು ಮಕ್ಕಳ ಆಟದ ಮೈದಾನಗಳಾಗಿ ರೂಪಿಸಲಾಗಿದೆ.
ಈ ವೇಳೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಸ್ವಚ್ಛ ಮಾಡಿದ ಜಾಗ ಮತ್ತೆ ಕಸದ ತಾಣವಾಗಬಾರದು. ಅದಕ್ಕೆ ಜನರ ಸಹಕಾರವೇ ಮುಖ್ಯ. ಮನೆ ಬಳಿ ಕಸ ಸಂಗ್ರಹಕ್ಕೆ ವಾಹನ ಬಂದಾಗ ಅಲ್ಲೇ ಕಸ ನೀಡಿ. ರಸ್ತೆ ಬದಿಗೆ ತಂದು ಎಸೆಯುವುದು ಸರಿಯಲ್ಲ ಎಂದು ಮನವಿ ಮಾಡಿದರು.
ಕಸ ಸಂಗ್ರಹ ವ್ಯವಸ್ಥೆಯಲ್ಲಿ ಕೆಲವು ಸಮಸ್ಯೆಗಳಿರುವುದನ್ನು ಒಪ್ಪಿಕೊಂಡ ಸಚಿವರು, ಹಳೆಯ ವಾಹನಗಳು, ಸಿಬ್ಬಂದಿ ಕೊರತೆ ಸೇರಿದಂತೆ ಹಲವು ಸವಾಲುಗಳಿವೆ ಎಂದರು. ಆದರೆ ಹಂತ ಹಂತವಾಗಿ ಹೊಸ ವ್ಯವಸ್ಥೆ ಜಾರಿಗೆ ತಂದು ಮನೆ ಮನೆಗೆ ಪರಿಣಾಮಕಾರಿಯಾಗಿ ಕಸ ಸಂಗ್ರಹ ಮಾಡುವ ಕೆಲಸ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ದಂಡ ಹಾಕುವುದರಿಂದ ಮಾತ್ರ ನಗರ ಸ್ವಚ್ಛವಾಗುವುದಿಲ್ಲ. ಜನರು ಸಹಕರಿಸಿದರೆ ಮಾತ್ರ ಬೆಂಗಳೂರು ಇನ್ನಷ್ಟು ಸುಂದರವಾಗುತ್ತದೆ ಎಂದು ಅವರು ಹೇಳಿದರು.
ಇದೇ ವೇಳೆ, ನಮ್ಮ ಮೆಟ್ರೋ ದರ ಪರಿಷ್ಕರಣೆ ವಿಚಾರವಾಗಿ ಈ ವಾರ ಬಿಎಂಆರ್ಸಿಎಲ್ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.
Laxmi News 24×7