ಹಾಸನ: ಪತ್ನಿ ಚೆನ್ನಮ್ಮ ಅವರ ಅಗಲಿಕೆಯ ನೋವಿನ ನಡುವೆಯೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕುಟುಂಬ ಸಮೇತ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು.
ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಚೆನ್ನಮ್ಮ ಅವರ ಸಮಾಧಿ ಸ್ಥಳಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಅವರೊಂದಿಗೆ ಪುತ್ರರಾದ ಎಚ್.ಡಿ. ರೇವಣ್ಣ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಪುತ್ರಿಯರಾದ ಅನಸೂಯ, ಶೈಲಜಾ ಹಾಗೂ ಸೊಸೆ ಭವಾನಿ ರೇವಣ್ಣ ಕೂಡ ಉಪಸ್ಥಿತರಿದ್ದರು.
ಸಮಾಧಿ ಬಳಿ ಕುಟುಂಬ ಸದಸ್ಯರು ನಂದಾದೀಪ ಹಚ್ಚಿ ಪೂಜೆ ನೆರವೇರಿಸಿದರು. ಜು. 30ರಂದು ನಡೆಯಲಿರುವ ಚೆನ್ನಮ್ಮ ಅವರ ಆರಾಧನಾ ಮಹೋತ್ಸವದವರೆಗೆ ದೀಪ ಆರದಂತೆ ನೋಡಿಕೊಳ್ಳುವಂತೆ ದೇವೇಗೌಡರು ಸೂಚನೆ ನೀಡಿದರು. ದೀಪದ ಸುತ್ತ ಹಾಲೋಬ್ರಿಕ್ಸ್ಗಳನ್ನು ಇಟ್ಟು ಸುರಕ್ಷಿತ ವ್ಯವಸ್ಥೆ ಮಾಡಲಾಯಿತು.
ಪ್ರತಿನಿತ್ಯ ಸಮಾಧಿ ಬಳಿ ಪೂಜೆ ನಡೆಯಬೇಕು. ಲಲಿತ ಸಹಸ್ರನಾಮ, ವಿಷ್ಣು ಸಹಸ್ರನಾಮ ಹಾಗೂ ಗಾಯತ್ರಿ ಮಂತ್ರಗಳನ್ನು ಪಠಿಸಬೇಕು ಎಂದು ಅರ್ಚಕರಿಗೆ ದೇವೇಗೌಡರು ಸೂಚಿಸಿದರು. ಶಿವಭಕ್ತೆಯಾಗಿದ್ದ ಚೆನ್ನಮ್ಮ ಅವರ ನೆನಪಿಗಾಗಿ ಮೊದಲು ರುದ್ರ ಚಮಕ ಶ್ಲೋಕ ಪಠಿಸಿ ಪೂಜೆ ನಡೆಸಲಾಯಿತು.
ಸಮಾಧಿ ಎದುರು ಮೂವರು ಅರ್ಚಕರು ಶ್ಲೋಕಗಳನ್ನು ಪಠಿಸಿ ನಮನ ಸಲ್ಲಿಸಿದರು. ಪುತ್ರಿ ಅನಸೂಯಾ ನೆಲದ ಮೇಲೆ ಕುಳಿತು ಶ್ಲೋಕ ಪಠಣದಲ್ಲೂ ಭಾಗಿಯಾದರು. ಚೆನ್ನಮ್ಮ ಅವರು ಬದುಕಿದ್ದಾಗ ಪ್ರತಿದಿನ ಪಠಿಸುತ್ತಿದ್ದ ಲಲಿತ ಸಹಸ್ರನಾಮ ಮತ್ತು ವಿಷ್ಣು ಸಹಸ್ರನಾಮವನ್ನು ಇದೇ ಸ್ಥಳದಲ್ಲಿ ಪ್ರತಿದಿನ ಪಠಿಸಲು ಕುಟುಂಬ ನಿರ್ಧರಿಸಿದೆ.
ಪತ್ನಿಯನ್ನು ಕಳೆದುಕೊಂಡ ಬಳಿಕ ಮೊದಲ ಬಾರಿಗೆ ಸಮಾಧಿ ಸ್ಥಳಕ್ಕೆ ಬಂದ ದೇವೇಗೌಡರು, ಸಮಾಧಿಗೆ ಪ್ರದಕ್ಷಿಣೆ ಹಾಕಿ ನಮಸ್ಕರಿಸಿದರು. ತಮ್ಮ ಬಾಳ ಸಂಗಾತಿಯನ್ನು ನೆನೆದು ಕೆಲಕಾಲ ಮೌನವಾಗಿ ಕಣ್ಣೀರಿಟ್ಟ ದೃಶ್ಯ ಅಲ್ಲಿದ್ದವರ ಮನಕಲಕುವಂತಿತ್ತು.
Laxmi News 24×7