ಬೆಂಗಳೂರು: ಕಾನೂನು ರಕ್ಷಿಸುವವನೇ ರಾಕ್ಷಸನಾಗಿ ಬದಲಾಗಿರುವ ಆಘಾತಕಾರಿ ಘಟನೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಉದ್ಯಮಿಯೊಬ್ಬರಿಗೆ 50 ಲಕ್ಷ ರೂ. ಬೇಡಿಕೆಯಿಟ್ಟು ಲೋಕಾಯುಕ್ತ ಟ್ರ್ಯಾಪ್ಗೆ ಒಳಗಾಗಿ ಸಸ್ಪೆಂಡ್ ಆಗಿದ್ದ ಪಿಎಸ್ಐ ಇದೀಗ ಪತ್ನಿ ಮತ್ತು ಮಾವನ ಮೇಲೆಯೇ ಮಚ್ಚು ಬೀಸಿ ಕೊಲೆಗೆ ಯತ್ನಿಸಿದ ಆರೋಪ ಕೇಳಿಬಂದಿದೆ.
ಪಿಎಸ್ಐ ಬೈರಪ್ಪ ವಿರುದ್ಧ ವಕೀಲೆಯಾಗಿರುವ ಪತ್ನಿ ಗಂಭೀರ ಆರೋಪಗಳನ್ನು ಮಾಡಿದ್ದು, ನಗರ ಪೊಲೀಸ್ ಆಯುಕ್ತರು ಹಾಗೂ ಡಿಜಿಗೆ ದೂರು ನೀಡಲು ಮುಂದಾಗಿದ್ದಾ
ಐದು ವರ್ಷದ ಹಿಂದೆ ಪಿಎಸ್ಐ ಬೈರಪ್ಪ ಜೊತೆ ಸಂತ್ರಸ್ತೆಯ ವಿವಾಹವಾಗಿತ್ತು. ಆರಂಭದಲ್ಲಿ ಮೂರು ವರ್ಷ ಪತ್ನಿಯನ್ನು ಚೆನ್ನಾಗಿಯೇ ನೋಡಿಕೊಂಡಿದ್ದ. ದಂಪತಿಗೆ ಮೂರು ವರ್ಷದ ಒಂದು ಹೆಣ್ಣು ಮಗುವಿದೆ. ಅದಾದ ಬಳಿಕ ಮನೆಗೆ ಯುವತಿಯರನ್ನು ಕರೆದುಕೊಂಡು ಬರ್ತಿದ್ದ. ಇದರ ಬಗ್ಗೆ ಪತ್ನಿ ಕುಟುಂಬಸ್ಥರಿಗೆ ತಿಳಿಸಿದ್ದರು. ಅಂದಿನಿಂದ ಕುಡಿದು ಬಂದು ಪತ್ನಿ ಜೊತೆಗೆ ನಿತ್ಯ ಗಲಾಟೆ ಮಾಡುತ್ತಿದ್ದ. ನಾನು ಮದುವೆ ಆಗಿದ್ದೇ ನೀನು ಹಣ ತರ್ತಿಯಾ ಅಂತ. ನಿಮ್ಮ ಅಪ್ಪನ ಮನೆಯಿಂದ 50 ಲಕ್ಷ ರೂ. ಹಣ ತಂದುಕೊಡು. ಇಲ್ಲದಿದ್ದರೆ ನೀನು ಬೇಡ ಎಂದು ನಿತ್ಯ ಕಿರುಕುಳ ನೀಡಿ, ಹಲ್ಲೆ ಮಾಡುತ್ತಿದ್ದ ಎಂದು ಪತ್ನಿ ಆರೋಪಿಸಿದ್ದಾರೆ.
ಇನ್ನೂ ತನ್ನ 3 ವರ್ಷದ ಹೆಣ್ಣು ಮಗು ತನಗೆ ಹುಟ್ಟಿದ್ದೇ ಅಲ್ಲ ಎಂದು ಸುಖಾಸುಮ್ಮನೆ ಅನುಮಾನ ಪಟ್ಟು ನಿತ್ಯ ಕಿರುಕುಳ ನೀಡುತ್ತಿದ್ದ. ಗಲಾಟೆಯಾದಾಗ ಬಟ್ಟೆಗಳನ್ನು ಚೀಲಕ್ಕೆ ತುಂಬಿಕೊಂಡು ಹೆಂಡತಿ-ಮಗುವನ್ನು ಬಿಟ್ಟು ಓಡಿಹೋಗುತ್ತಿದ್ದ. ಇದೀಗ ಗಲಾಟೆಯಾದ ಬಳಿಕ ಹೆಂಡತಿ ತಂದೆ ಮನೆಗೆ ಬಂದಿದ್ದು, ಅವರ ಬಟ್ಟೆಗಳನ್ನೂ ಪೋರ್ಟರ್ ಮಾಡಿದ್ದಾನೆ.
ಪತ್ನಿ, ಮಾವನ ಮೇಲೆ ಮಚ್ಚು ಬೀಸಿ ಕೊಲೆ ಯತ್ನ:
ಇದೇ ಜುಲೈ 12ರಂದು ಮನೆಯಲ್ಲಿ ಗಲಾಟೆ ನಡೆದಾಗ ಬುದ್ಧಿ ಹೇಳಲು ಬಂದ ಮಾವನ ಮೇಲೆಯೇ ಮಚ್ಚು ತೆಗೆದುಕೊಂಡು ಹಲ್ಲೆಗೆ ಮುಂದಾಗಿದ್ದ. ಈ ಸಂಬಂಧ ಕೆಂಗೇರಿ ಠಾಣೆಗೆ ದೂರು ನೀಡಲು ಹೋಗಿದ್ದೆ. ಆದರೆ ಪೊಲೀಸರು ದೂರು ಪಡೆಯಲು ಹಿಂದೇಟು ಹಾಕಿದ್ದು, ಕೊನೆಗೆ ಎನ್ಸಿಆರ್ ಮಾಡಿ ಕಳಿಸಿದ್ದಾರೆ. ಅಲ್ಲದೇ ಮನೆಯ ಮುಂದೆ ರೌಡಿಗಳನ್ನು ನಿಲ್ಲಿಸಿ, ಹೆಂಡತಿಯನ್ನು ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕುತ್ತಿದ್ದ.
ಪರಸ್ತ್ರೀ ವ್ಯಾಮೋಹ ಮತ್ತು ಶೋಕಿ:
ಹೆಂಡತಿ, ಮಗುವನ್ನು ಮನೆಯಿಂದ ಹೊರಗಿಟ್ಟು ಶೋಕಿ ಮಾಡುತ್ತಿದ್ದ ಪಿಎಸ್ಐ, ಮನೆಗೆ ಯುವತಿಯರನ್ನು ಕರೆದುಕೊಂಡು ಬರುತ್ತಿದ್ದ. ಪತ್ನಿಗೆ ಗೊತ್ತಿಲ್ಲದೆ ಮನೆಯಲ್ಲಿ ಕಾಂಡೋಮ್ ತಂದಿಟ್ಟುಕೊಳ್ಳುತ್ತಿದ್ದ. ಅಲ್ಲದೆ, ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾಗುವ ಯುವತಿಯರಿಗೆ `ಲವ್ ಯೂ, ಮಿಸ್ ಯೂ’ ಎಂದು ಮೆಸೇಜ್ ಮಾಡಿ, ಮದುವೆ ಆಗುವುದಾಗಿ ನಂಬಿಸಿ ಸುತ್ತಾಡುತ್ತಿದ್ದ. ಕೆಲ ಯುವತಿಯರು ಒಪ್ಪದಿದ್ದಾಗ ಅವರಿಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ. ಕೊನೆಗೆ ಆತನ ಚಾಟ್ಗಳನ್ನು ನೊಂದ ಯುವತಿಯರೇ ಪಿಎಸ್ಐ ಪತ್ನಿಗೆ ಕಳುಹಿಸಿದ್ದಾರೆ. ಅಫೇರ್ಗಳ ಬಗ್ಗೆ ಕೇಳಿದ್ರೆ ನಾನು ಗಂಡಸು, ನಾನು ಇರೋದೇ ಹೀಗೆ ಅಂತಿದ್ದ ಎಂದು ಆರೋಪಿಸಿದ್ದಾರೆ.
ಇಷ್ಟೆಲ್ಲ ಆದರೂ ಪಿಎಸ್ಐ ವಿರುದ್ಧ ದೂರು ಕೊಟ್ರೆ ಪೊಲೀಸರು ಸ್ವೀಕರಿಸಲ್ಲ. 112ಗೆ ಕರೆ ಮಾಡಿ ಪೊಲೀಸರನ್ನು ಕರೆಸಿದ್ದರೂ ಅವರು ಏನೂ ಮಾಡಿಲ್ಲ. ಕೆಂಗೇರಿ ಪೊಲೀಸ್ ಠಾಣೆಗೆ ಹೋಗಿ ರಾತ್ರಿ ಇಡೀ ಕಾದರೂ ಪೊಲೀಸರು ಎಫ್ಐಆರ್ ದಾಖಲಿಸಲು ಹಿಂದೇಟು ಹಾಕಿದ್ದಾರೆ. ಪಿಎಸ್ಐ ಬೈರಪ್ಪನ ಬ್ಯಾಚ್ ಮೇಟ್ ಆದ ಪಿಎಸ್ಐ ಮೋಹನ್ ಮುರುಳಿ ಕೆಂಗೇರಿ ಠಾಣೆಯಲ್ಲಿದ್ದು, ತನ್ನ ಬ್ಯಾಚ್ಮೇಟ್ನ ರಕ್ಷಣೆಗಾಗಿ ಕೇವಲ ಎನ್ಸಿಆರ್ ಮಾಡಿ ವಾಪಸ್ ಕಳುಹಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮಗುವಿಗಾಗಿ ಇಷ್ಟು ದಿನ ಸಹಿಸಿಕೊಂಡಿದ್ದ ಪತ್ನಿ, ಸದ್ಯ ತಂದೆಯ ಮನೆ ಸೇರಿದ್ದು, ಇನ್ಫ್ಯಾಂಟ್ರಿ ರಸ್ತೆಯಲ್ಲಿರುವ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ನೀಡಲು ಸಿದ್ಧರಾಗಿದ್ದಾರೆ.
Laxmi News 24×7