Breaking News

ಬಿಡದಿ ಟೌನ್‌ಶಿಪ್ ಜಟಾಪಟಿ – ರೈತರ ಹೋರಾಟಕ್ಕೆ ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ ಬೆಂಬಲ

Spread the love

ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ರೈತರು  ನಡೆಸುತ್ತಿರುವ ಪ್ರತಿಭಟನೆ ಸದ್ಯ 485ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಭೈರಮಂಗಲ ಗ್ರಾಮದಲ್ಲಿ ನಡೆಯುತ್ತಿರುವ ರೈತರ ಈ ಸುದೀರ್ಘ ಹೋರಾಟಕ್ಕೆ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ  ಭಾಗವಹಿಸಿ, ತಮ್ಮ ಪೂರ್ಣ ಬೆಂಬಲವನ್ನು ಘೋಷಿಸಿದ್ದಾರೆ.

ಪ್ರತಿಭಟನಾ ಸ್ಥಳದಲ್ಲಿ ರೈತರ ಅಹವಾಲು ಮತ್ತು ಸಮಸ್ಯೆಗಳನ್ನು ಆಲಿಸಿದ ಸಂತೋಷ್ ಹೆಗ್ಡೆಗೆ, ತಮ್ಮ ಭೂಮಿಯನ್ನು ಉಳಿಸಿಕೊಡುವಂತೆ ರೈತರು ಮನವಿ ಮಾಡಿದರು. ಈ ವೇಳೆ ಸಂತೋಷ್ ಹೆಗ್ಡೆ ಮಾತನಾಡಿ, ರೈತರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿರುವುದನ್ನು ನೋಡಿ ನನಗೆ ನೋವು ತಡೆಯಲಾಗದೆ ಇಲ್ಲಿಗೆ ಬಂದಿದ್ದೇನೆ. ವ್ಯವಸಾಯ ಇಲ್ಲದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಜಗತ್ತಿಗೆ ಎಷ್ಟೇ ದೊಡ್ಡ ಎಐ ತಂತ್ರಜ್ಞಾನ ಬಂದರೂ, ಕೃಷಿ ಮಾಡದಿದ್ದರೆ ಹೊಟ್ಟೆ ತುಂಬುವುದಿಲ್ಲ. ಕೃಷಿ ಕ್ಷೀಣಿಸಿದರೆ ಭವಿಷ್ಯದಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಾಗಲಿದೆ ಎಂದರು.

ಪಟ್ಟಣಗಳಲ್ಲಿರುವ ಕೆರೆಗಳನ್ನು ಮುಚ್ಚಿ ಕಟ್ಟಡಗಳನ್ನು ಕಟ್ಟಲಾಗುತ್ತಿದೆ. ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸರ್ಕಾರಕ್ಕೆ ವಿವೇಚನೆ ಇರಬೇಕು. ನಾವು ಬದುಕಬೇಕಾದರೆ ಅಭಿವೃದ್ಧಿ ಬೇಕು, ಆದರೆ ಅಭಿವೃದ್ಧಿ ಇರಬೇಕಾದರೆ ಮೊದಲು ಕೃಷಿ ಉಳಿಯಬೇಕು. ರೈತರ ಕಷ್ಟ ಅರ್ಥವಾಗದಿದ್ದರೆ ನೀವು ಹೇಗೆ ಆಡಳಿತ ನಡೆಸುತ್ತೀರಿ? ರೈತರಿಂದ ವ್ಯವಸಾಯವನ್ನು ಕಸಿದುಕೊಂಡು ಅವರಿಗೆ ಬೇರೆ ಕೆಲಸ ಕೊಡುವುದು ಎಷ್ಟು ಸರಿ? ಇಂತಹ ಜನಪ್ರತಿನಿಧಿಗಳನ್ನು ನಾವು ಯಾಕೆ ಆಯ್ಕೆ ಮಾಡಬೇಕು? ನಾನು ಬದುಕಿರುವಷ್ಟು ದಿನ ರೈತರ ಜೊತೆ ಇರುತ್ತೇನೆ, ಅವರ ಹೋರಾಟಕ್ಕೆ ಕೈಜೋಡಿಸುತ್ತೇನೆ. ಸರ್ಕಾರ ಮೊದಲು ರೈತರನ್ನು ರಕ್ಷಣೆ ಮಾಡಲಿ ಎಂದು ಹೇಳಿದರು.

ಧರಣಿ ನಿರತ ಸ್ಥಳದಲ್ಲೇ ಕುಳಿತು ಸಂತೋಷ್ ಹೆಗ್ಡೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಬಿಡದಿ ಟೌನ್‌ಶಿಪ್‌ಗಾಗಿ ರೈತರಿಂದ ಬಲವಂತವಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸಬಾರದು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.


Spread the love

About Laxminews 24x7

Check Also

ಎಸ್‌ಐಆರ್ ಕಾರ್ಯಕ್ಕೆ ನೆಟ್‌ವರ್ಕ್ ಸಮಸ್ಯೆ – ಮೊಬೈಲ್ ಹಿಡಿದು ಬೆಟ್ಟ ಏರಿದ ಬಿಎಲ್‌ಒಗಳು

Spread the loveರಾಯಚೂರು: ಲಿಂಗಸುಗೂರು  ತಾಲೂಕಿನಲ್ಲಿ ಎಸ್‌ಐಆರ್‌‌ ಕಾರ್ಯದಲ್ಲಿ ತೊಡಗಿರುವ ಬಿಎಲ್‌ಒಗಳು ಮೊಬೈಲ್‌ಗೆ ನೆಟ್‌ವರ್ಕ್ ಇಲ್ಲದೇ ಪರದಾಡಿದ್ದಾರೆ. ನೆಟ್‌ವರ್ಕ್‌ಗಾಗಿ ಮೊಬೈಲ್‌ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ