ಬೆಂಗಳೂರು: ಹಿರಿಯೂರು ಉಪಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಲ್ಲ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಜೆಪಿ ಭವನದಲ್ಲಿ ಮಾತನಾಡಿದ ಅವರು, ಹಿರಿಯೂರು ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧೆ ಮಾಡಬೇಕು ಅಂತಿದೆ. ನಾನು ಹಿರಿಯೂರು ಉಪಚುನಾವಣೆಗೆ ನಿಲ್ಲೋದಿಲ್ಲ. ಉಪಚುನಾವಣೆಗೆ ನಿಲ್ಲೋದೇ ನನ್ನ ಕೆಲಸ ಅಲ್ಲ. ಕೇಂದ್ರದಲ್ಲಿ ಮಂತ್ರಿ ಆಗಿದ್ದೇನೆ. ಆ ಕೆಲಸ ಮಾಡಿಕೊಂಡು ಹೋಗ್ತಿನಿ.ನಾವು-ಬಿಜೆಪಿ ಒಟ್ಟಾಗಿ ಹೋಗ್ತೀವಿ. ಈಗಾಗಲೇ ಬಿಜೆಪಿ ಹೈಕಮಾಂಡ್ ಬಳಿ ರಿಕ್ವೆಸ್ಟ್ ಮಾಡಿದ್ದೇನೆ. ರಾಜ್ಯದಲ್ಲಿ ಇರುವ ಈ ಕೆಟ್ಟ ಸರ್ಕಾರ ತೆಗೆಯೋ ಕೆಲಸ ಮಾಡ್ತೀವಿ ಎಂದಿದ್ದಾರೆ.
ರಾಜ್ಯದಲ್ಲೂ ಪಕ್ಷ ಸಂಘಟನೆ ಮಾಡ್ತೀನಿ:
ರಾಜ್ಯಕ್ಕೆ ವಾಪಸ್ ಬರ್ತೀನಿ ಎಂದು ಮೈಸೂರಿನಲ್ಲಿ ಹೇಳಿದ್ದ ಹೇಳಿಕೆಗೆ ಸ್ಪಷ್ಟನೆ ನೀಡಿದ ಅವರು, ಬರ್ತೀನಿ ಅಂದರೆ ನಾಳೆನೇ ಬರ್ತೀನಿ ಅಂತಾನಾ? ನಾಳೆನೇ ಆಗೋದಿಲ್ಲ. ಇನ್ನು ಎರಡು ವರ್ಷ ಇದೆ. ಕೇಂದ್ರದ ಸಚಿವನಾಗಿ ಇದ್ದೇನೆ. ಕೇಂದ್ರದಲ್ಲಿ ಮೋದಿ ಅವರು ಜವಾಬ್ದಾರಿ ಕೊಟ್ಟಿದ್ದಾರೆ. ಇನ್ನು ಮೂರು ವರ್ಷ ಇದೆ. 3 ವರ್ಷ ಕೇಂದ್ರದಲ್ಲಿ ಕೆಲಸ ಮಾಡ್ತೀನಿ. ಇಲ್ಲೂ ಪಕ್ಷ ಸಂಘಟನೆ ಮಾಡ್ತೀನಿ ಎಂದಿದ್ದಾರೆ.
ಇದೇ ವೇಳೆ, ಕೂಡಲೇ ರಾಜ್ಯ ಸರ್ಕಾರ ಅಧಿವೇಶನ ಕರೆಯಬೇಕು. ಎಸ್ಐಆರ್ಗೂ ಅಧಿವೇಶನಕ್ಕೂ ಸಂಬAಧವಿಲ್ಲ. ಈ ಸಮಯದಲ್ಲಿ ಅಧಿವೇಶನ ಕರೆಯೋದು ಸೂಕ್ತ. ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ. ಇದರ ಬಗ್ಗೆ ಚರ್ಚೆ ಆಗಬೇಕು. ಹೀಗಾಗಿ ಕೂಡಲೇ ಅಧಿವೇಶನ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ.
ಮಂಡ್ಯದಲ್ಲಿ ಕಬ್ಬು ಬೆಳೆಗಾರರಿಗೆ ನೀರು ಕೊಡಿ:
ಮಂಡ್ಯದಲ್ಲಿ ಕಬ್ಬು ಬೆಳೆ ಒಣಗಿ ಹೋಗಿದೆ. ಸರ್ಕಾರಕ್ಕೆ ಆಗ್ರಹ ಮಾಡ್ತೀನಿ. ಒಣಗಿರೋ ಬೆಳೆಗೆ ಕೂಡಲೇ ನೀರು ಬಿಡಬೇಕು. ತಮಿಳುನಾಡಿಗೆ ಕೊಡಬೇಕಾದ ನೀರು ಮಳೆ ಬಂದರೆ ಮುಂದೆ ಕೊಡೋಣ. ಕಾವೇರಿ ಭಾಗದ ರೈತರ ಬೆಳೆ ಉಳಿಸೋಕೆ ರಾಜ್ಯ ಸರ್ಕಾರ ಮೊದಲು ನೀರು ಬಿಡಲಿ ಎಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಕೃಷಿ ಸಚಿವರು ಇಲ್ಲ. ಸಿಎಂ ಅವರೇ ಇದ್ದಾರೆ. ರೈತರ ಸಮಸ್ಯೆ ಬಗೆಹರಿಸಿ. ಬರದಿಂದ ಸಮಸ್ಯೆ ಆಗ್ತಿದೆ. ಆ ಬಗ್ಗೆ ಗಮನಹರಿಸಿ. ಸಿಎಂ ಅವರು ಪ್ರಗತಿ ಪರಿಶೀಲನೆ ಸಭೆ ಮಾಡಿದ್ದಾರೆ. ಅದೇನು ಚರ್ಚೆ ಮಾಡಿದ್ರೋ ಗೊತ್ತಿಲ್ಲ. ಇವತ್ತು ಬೆಳಗಾವಿಗೆ ಹೋಗಿದ್ದಾರೆ. ಮಳೆಯಿಂದ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಅದರ ಕಡೆ ಗಮನಹರಿಸಿ. ಹಲವು ಭಾಗದಲ್ಲಿ ಮಳೆ ಆಗ್ತಿಲ್ಲ. ಅಲ್ಲಿನ ಸಮಸ್ಯೆ ಪರಿಹಾರ ಮಾಡಿ ಎಂದು ಸಲಹೆ ನೀಡಿದ್ದಾರೆ.
Laxmi News 24×7