ಬೆಳಗಾವಿ (ಶೆಗಣಮಟ್ಟಿ)- ಹುನಗುಂದ-ರಾಯಚೂರ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ಮಿಸುತ್ತಿರುವ ಚತುಷ್ಪಥ ರಸ್ತೆಯ ಕಾಮಗಾರಿಗನುಗುಣವಾಗಿ, ಈ ಮಾರ್ಗದಲ್ಲಿ ಸಂಪರ್ಕ ರಸ್ತೆ ನಿರ್ಮಾಣದ ಕೊರತೆಯಿಂದಾಗಿ ರೈತರು ಹಾಗೂ ಸಾರ್ವಜನಿಕರು ದಿನನಿತ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿಯಲು ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳು ಶ್ರೀ ಜಗದೀಶ ಶೆಟ್ಟರ, ಇವರು ಬೈಲಹೊಂಗಲ ತಾಲೂಕಿನ ವ್ಯಾಪ್ತಿಯಡಿ ಇರುವ ಮರಿಕಟ್ಟಿ ಕ್ರಾಸ್, ನಾಗನೂರ, ಮತ್ತು ಸವದತ್ತಿ ತಾಲೂಕಿನ ಇಂಚಲ್, ಮರಕುಂಬಿ ಗ್ರಾಮಗಳಿಗೆ ಭೇಟಿ ನೀಡಿ, ಪರಿವೀಕ್ಷಣೆ ಕಾರ್ಯ ಕೈಕೊಂಡರು.
ಇತ್ತೀಚೆಗೆ ಮೇಲೆ ಪ್ರಸ್ತಾಪಿತ ಗ್ರಾಮದ ರೈತರು ಹಾಗೂ ನಿವಾಸಿಗಳು ಸಂಸದರನ್ನು ಭೇಟಿ ಮಾಡಿ ಅವರ ಗ್ರಾಮಕ್ಕೆ ಹತ್ತಿರವಾಗಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ರಸ್ತೆ ಮಾರ್ಗದಲ್ಲಿ ಅವರ ಹೊಲಗಳಿಗೆ ಹೋಗಲು ಸಂಪರ್ಕ ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಲ್ಪಿಸದೆ ಇರುವುದರಿಂದ ಹೊಲಗಳಿಗೆ ತೆರಳಲು ಕಷ್ಟವಾಗುತ್ತಿರುವ ಬಗ್ಗೆ ಸಂಸದರ ಗಮನವನ್ನು ಸೆಳೆದಿದ್ದರು.
ಅದರಂತೆ ಮರಿಕಟ್ಟಿ ಕ್ರಾಸ್ ಹತ್ತಿರ ಸಹ ನಿರ್ಮಾಣವಾಗುತ್ತಿರುವ “ಕಲ್ವರ್ಟ” ಎತ್ತರವನ್ನು 4.5 ಮೀಟರ ದಿಂದ 5.5 ಮೀಟರ್ ವರೆಗೆ ಹೆಚ್ಚಿಸಿ, ಕೃಷಿ ಫಸಲನ್ನು ಸಾಗಿಸಲು ವಾಹನಗಳಿಗೆ ಅನುಕೂಲತೆ ಕಲ್ಪಿಸಲು ಸಂಸದರಲ್ಲಿ ವಿನಂತಿಸಲಾಗಿತ್ತು.
ಈ ನಿಟ್ಟಿನಲ್ಲಿ ಸಂಸದರಾದ ಶ್ರೀ ಜಗದೀಶ ಶೆಟ್ಟರ ಇವರು ಮೇಲೆ ಪ್ರಸ್ತಾಪಿತ ಎಲ್ಲ ಪ್ರದೇಶಗಳಿಗೆ ಭೇಟಿ ನೀಡಿ ಮತ್ತು ಆಯಾ ಮಾರ್ಗದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಪರ್ಕ ರಸ್ತೆಯನ್ನು ಕಲ್ಪಿಸುವ ಬಗ್ಗೆ ಹಾಗೂ ನಿರ್ಮಾಣ ಹಂತದಲ್ಲಿರುವ ಕಲ್ವರ್ಟಗಳ ಎತ್ತರವನ್ನು ಕನಿಷ್ಠ 5.5 ಮೀಟರಗೆ ಹೆಚ್ಚಿಸುವ ಬಗ್ಗೆ ವಿಷಯ ಅವಲೋಕಿಸುವ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಇದೆ ಸಂದರ್ಭದಲ್ಲಿ ಸೂಚಿಸಿದರು.
ಬೆಳಗಾವಿ ಸಂಸದರ ಪರಿವೀಕ್ಷಣೆ ಸಮಯದಲ್ಲಿ ಬೈಲಹೊಂಗಲ ಶಾಸಕರಾದ ಶ್ರಿ ಮಹಾಂತೇಶ ಕೌಜಲಗಿ ಮತ್ತು ಮಾಜಿ ಶಾಸಕರಾದ ಶ್ರೀ ವಿ. ಐ ಪಾಟೀಲ ಹಾಗೂ ಶ್ರೀ ಜಗದೀಶ ಮೆಟಗುಡ, ಕಿತ್ತೂರ ಮಾಜಿ ಶಾಸಕರಾದ ಶ್ರೀ ಮಹಾಂತೇಶ ದೊಡಗೌಡರ, ಪ್ರಮುಖರಾದ ಶ್ರೀ ವಿಜಯ ಮೆಟಗುಡ, ಶ್ರೀ ಗುರುಪಾದ ಕಳ್ಳಿ, ಶ್ರೀ ಸುಭಾಸ ತುರಮರಿ, ಶ್ರೀ ಪವನ ಗುರವೆ, ಬಾಗಲಕೋಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಇತರೆ ಅಧಿಕಾರಿಗಳು ಭಾಗವಹಿಸಿದ್ದರು.
Laxmi News 24×7