ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದ ಜೆಜೆ ಕಾಲೋನಿಯಲ್ಲಿ ನಡೆದಿದ್ದ ಅಕ್ಕ-ತಂಗಿಯ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಮಾಹಿತಿ ಹೊರಬಿದ್ದಿದೆ. ಪತ್ನಿ ತವರು ಮನೆಯಿಂದ ಮತ್ತೆ ಮನೆಗೆ ಬರಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಪತಿ ಏಜಾಜ್, ಪತ್ನಿ ಶಮಾ ಹಾಗೂ ಆಕೆಯ ತಂಗಿ ರೇಷ್ಮಾಳನ್ನು ಕತ್ತು ಕೊಯ್ದು ಹತ್ಯೆ ಮಾಡಿರುವುದಾಗಿ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಶಮಾ ಮತ್ತು ಏಜಾಜ್ಗೆ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಕೌಟುಂಬಿಕ ಕಲಹದಿಂದ ಬೇಸತ್ತು ಶಮಾ ಮಕ್ಕಳೊಂದಿಗೆ ತವರು ಮನೆ ಸೇರಿದ್ದಳು. ಈ ನಡುವೆ ಹಲವು ಬಾರಿ ಮನೆಗೆ ಬರುವಂತೆ ಏಜಾಜ್ ಮನವಿ ಮಾಡಿದ್ದರೂ, ಶಮಾ ನಿರಾಕರಿಸಿದ್ದಳು ಎನ್ನಲಾಗಿದೆ.
ಸೋಮವಾರ ಮುಂಜಾನೆ ಕೋಲಾರದಿಂದ ಚಿಂತಾಮಣಿಗೆ ಬಂದ ಏಜಾಜ್, ಮನೆಯಲ್ಲಿ ಮಲಗಿದ್ದ ಪತ್ನಿ ಶಮಾಳ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಬಳಿಕ ಅಲ್ಲೇ ಇದ್ದ ನಾದಿನಿ ರೇಷ್ಮಾಳನ್ನೂ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಕೊಲೆ ಮಾಡಿದ ಬಳಿಕ ತನ್ನ ಮೂವರು ಮಕ್ಕಳನ್ನು ಬೈಕ್ನಲ್ಲಿ ಕರೆದುಕೊಂಡು ಕೋಲಾರಕ್ಕೆ ತೆರಳಿ ಮನೆಯಲ್ಲಿ ಬಿಟ್ಟು, ನಂತರ ಗಲ್ಪೇಟೆ ಪೊಲೀಸ್ ಠಾಣೆಗೆ ತೆರಳಿ ತಾನೇ ಎರಡು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ.
ಆರೋಪಿ ಏಜಾಜ್ಗೆ ಮದ್ಯಪಾನ, ಜೂಜು ಸೇರಿದಂತೆ ಹಲವು ದುಶ್ಚಟಗಳಿದ್ದವು. ಇದೇ ವಿಚಾರವಾಗಿ ಪತ್ನಿಯೊಂದಿಗೆ ಆಗಾಗ ಜಗಳ ನಡೆಯುತ್ತಿತ್ತು. ಕಿರುಕುಳದಿಂದ ಬೇಸತ್ತ ಶಮಾ ವಿಚ್ಛೇದನಕ್ಕೂ ಮುಂದಾಗಿದ್ದಳು ಎನ್ನಲಾಗಿದೆ.
ಶಮಾಳನ್ನು ತನ್ನ ಬಳಿ ಬರದಂತೆ ಆಕೆಯ ತಂಗಿ ರೇಷ್ಮಾ ಮತ್ತು ಕುಟುಂಬದವರು ತಡೆಯುತ್ತಿದ್ದರು ಎಂದು ಏಜಾಜ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಇದೇ ಕಾರಣದಿಂದ ರೇಷ್ಮಾಳನ್ನೂ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಚಿಂತಾಮಣಿ ನಗರ ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿಸಿದ್ದಾರೆ. ಆರೋಪಿಯ ಹೇಳಿಕೆ, ಕುಟುಂಬಸ್ಥರ ಮಾಹಿತಿ ಹಾಗೂ ಇತರೆ ಸಾಕ್ಷ್ಯಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.
Laxmi News 24×7