ಚಿಕ್ಕೋಡಿ: ಮನುಷ್ಯ ಎಲ್ಲ ಪ್ರಾಣಿಗಳಲ್ಲಿ ಬುದ್ಧಿಜೀವಿಯಾಗಿದ್ದರೂ, ಇಂದು ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರಲು ಅವನೇ ಪ್ರಮುಖ ಕಾರಣನಾಗಿದ್ದಾನೆ. ಪರಿಸರ ಸಂರಕ್ಷಣೆ ಎಂಬುದು ಇಂದು ನಮ್ಮ ಮುಂದಿರುವ ಆಯ್ಕೆಯಲ್ಲ, ಬದಲಿಗೆ ಅದು ನಮ್ಮ ಅನಿವಾರ್ಯತೆಯಾಗಿದೆ,” ಎಂದು ಚಿಕ್ಕೋಡಿ ಪಟ್ಟಣದ ಸಿ. ಟಿ. ಇ. ಸಂಸ್ಥೆಯ ಶ್ರೀಮತಿ ಎ. ಎ. ಪಾಟೀಲ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಸ್. ಸಿ. ಜಕಾತಿ ಅವರು ಅಭಿಪ್ರಾಯಪಟ್ಟರು.
ಜೂನ್ 5ರಂದು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್) ಘಟಕಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಕಾಲೇಜು ಆವರಣದಲ್ಲಿ ಸಸಿಗಳನ್ನು ನೆಟ್ಟು, ನೀರು ಉಣಿಸುವುದರ ಮೂಲಕ ಅವರು ಮಾತನಾಡುತ್ತಿದ್ದರು.
“ಮರ ನೆಡುವ ಕೈಗಳು ಪ್ರಕೃತಿಯನ್ನು ಸೃಷ್ಟಿಸುತ್ತವೆ; ಮರ ಕಾಪಾಡುವ ಹೃದಯಗಳು ನಾಗರಿಕತೆಯನ್ನು ಉಳಿಸುತ್ತವೆ. ನೀರು, ಗಾಳಿ, ಮಣ್ಣು ಶುದ್ಧವಾಗಿದ್ದರೆ ಮಾತ್ರ ಮಾನವನ ಜೀವನ ಸುಂದರವಾಗಿರುತ್ತದೆ. ಪರಿಸರ ಉಳಿದರೆ ನಮ್ಮ ಭವಿಷ್ಯ ಉಳಿಯುತ್ತದೆ, ಪರಿಸರ ನಾಶವಾದರೆ ಮಾನವನ ಅಸ್ತಿತ್ವವೇ ಪ್ರಶ್ನಾರ್ಹವಾಗುತ್ತದೆ. ಆದ್ದರಿಂದ ನಾವೆಲ್ಲರೂ ಪ್ರಕೃತಿಯನ್ನು ಕಾಪಾಡಬೇಕಾಗಿದೆ,” ಎಂದು ಅವರು ಕರೆ ನೀಡಿದರು.
ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಮುಖರಾದ ಡಾ. ಎಚ್. ಎ. ಭೋಗಲೆ, ಪ್ರೊ. ವಿ. ವಿ. ನಾಯಕ ಹಾಗೂ ಎನ್.ಎಸ್.ಎಸ್ ಅಧಿಕಾರಿಗಳಾದ ಕು. ರೋಹಿಣಿ ಕಂಬಾರ ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಅಪಾರ ಸಂಖ್ಯೆಯ ವಿದ್ಯಾರ್ಥಿನಿಯರು ಸಸಿ ನೆಡುವ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಪರಿಸರ ದಿನಾಚರಣೆಯನ್ನು ಯಶಸ್ವಿಗೊಳಿಸಿದರು.
Laxmi News 24×7