ಬೆಳಗಾವಿ: ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಕೈಗೆತ್ತಿಕೊಂಡ ಎಸ್ಕ್ಲೇಟರ್, ಲಿಫ್ಟ್ ಮತ್ತು ಪಾದಚಾರಿ ಸೇತುವೆ(ಫುಟ್ ಓವರ್ ಬ್ರಿಡ್ಜ್) ಕಾಮಗಾರಿ ಇನ್ನೂ ಮುಗಿಯದ ಕಾರಣ, ಪ್ರಯಾಣಿಕರ ಪರದಾಟ ಮುಂದುವರಿದಿದೆ.
ರೈಲ್ವೆ ನಿಲ್ದಾಣ ಪ್ರವೇಶಿಸಿ ಒಂದು ಬದಿಯ ಪ್ಲಾಟ್ಫಾರಂನಿಂದ ಮತ್ತೊಂದು ಬದಿ ಪ್ಲಾಟ್ಫಾರಂಗೆ ತೆರಳಲು ಪ್ರಯಾಣಿಕರು ನರಕಯಾತನೆ ಅನುಭವಿಸಬೇಕಾದ ಪರಿಸ್ಥಿತಿ ಇದೆ.
ಬೆಳಗಾವಿ ರೈಲ್ವೆ ನಿಲ್ದಾಣವು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ಸಂಪರ್ಕ ಕೊಂಡಿ. ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಹಲವು ಮಹಾನಗರಗಳನ್ನೂ ಇದು ಬೆಸೆಯುತ್ತದೆ. ಈ ನಿಲ್ದಾಣದ ಮೂಲಕ ನಿತ್ಯ 10 ಸಾವಿರ ಪ್ರಯಾಣಿಕರು ಸಂಚರಿಸುತ್ತಾರೆ. ನಿತ್ಯ 29 ಜೋಡಿ ರೈಲು ಕಾರ್ಯಾಚರಣೆ ನಡೆಸುತ್ತಿವೆ.
ಪ್ರಯಾಣಿಕರಿಗೆ ಉತ್ಕೃಷ್ಟ ದರ್ಜೆ ಸೇವೆ ಒದಗಿಸುವ ದೃಷ್ಟಿಯಿಂದ ಇಲ್ಲಿ ಎಸ್ಕ್ಲೇಟರ್, ಲಿಫ್ಟ್ ಮತ್ತು ಪಾದಚಾರಿ ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಕಾಮಗಾರಿ ಆರಂಭವಾಗಿ ಎರಡು ವರ್ಷಗಳಾದರೂ ಮುಗಿಯದಿರುವುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಬೆಳಗಾವಿಯಿಂದ ದೂರದ ಊರುಗಳಿಗೆ ತೆರಳುವವರು ‘ಭಾರ’ವಾದ ವಸ್ತುಗಳನ್ನು ಹೊತ್ತು ನಿಲ್ದಾಣಕ್ಕೆ ಬರುತ್ತಾರೆ. ಆದರೆ, ಎಸ್ಕ್ಲೇಟರ್, ಲಿಫ್ಟ್ ಮತ್ತು ಪಾದಚಾರಿ ಮಾರ್ಗ ಕಾರ್ಯಾರಂಭ ಮಾಡಿಲ್ಲ. ಹಾಗಾಗಿ ಒಂದು ಬದಿಯ ಪ್ಲಾಟ್ಫಾರಂನಿಂದ ರೈಲು ಹಳಿ ಮೇಲೆ ಇಳಿದು, ಮತ್ತೊಂದು ಬದಿಯ ಪ್ಲಾಟ್ಫಾರಂಗೆ ಹೋಗುತ್ತಿದ್ದಾರೆ. ಅಪಾಯವನ್ನೂ ಲೆಕ್ಕಿಸದೆ ಹೀಗೆ ದಾಟುವಾಗ ಬಿದ್ದು ಪೆಟ್ಟು ತಿಂದವರೂ ಇದ್ದಾರೆ.
ಇನ್ನೂ ಹಳಿ ದಾಟಿ ಹೋಗಲಾಗದವರು ನಿಲ್ದಾಣದ ಪ್ರವೇಶ ದ್ವಾರದಿಂದ ಸುಮಾರು ಅರ್ಧ ಕಿ.ಮೀ ದೂರದವರೆಗೆ ಇರುವ ಇನ್ನೊಂದು ಪಾದಚಾರಿ ಸೇತುವೆ ಬಳಿ ಹೋಗಿ, ಮತ್ತೊಂದು ಬದಿಯ ಪ್ಲಾಟ್ಫಾರಂ ತಲುಪುತ್ತಿರುವುದು ಕಂಡುಬರುತ್ತಿದೆ.
‘ಏನೇ ತೊಡಕುಗಳಿದ್ದರೂ ಬೇಗ ಬಗೆಹರಿಸಿ, ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಎಸ್ಕ್ಲೇಟರ್, ಲಿಫ್ಟ್ ಮತ್ತು ಪಾದಚಾರಿ ಸೇತುವೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು’ ಎಂಬುದು ಪ್ರಯಾಣಿಕರ ಆಗ್ರಹ.
Laxmi News 24×7