ಬೆಳಗಾವಿ: ಪ್ರತಿ ವರ್ಷ ಚಳಿಗಾಲದಲ್ಲಿ ಮಾತ್ರ ಅಧಿವೇಶನ ಕಾಣುತ್ತಿದ್ದ ಬೆಳಗಾವಿಯ ಸುವರ್ಣಸೌಧ, ಈ ಬಾರಿ ಮುಂಗಾರು ಅಧಿವೇಶನಕ್ಕೆ ಸಾಕ್ಷಿಯಾಗುವುದು ಬಹುತೇಕ ಪಕ್ಕಾ ಆಗಿದೆ.
ಡಿಸೆಂಬರ್ ತಿಂಗಳ ಚಳಿ, ವಸತಿ ಸೌಕರ್ಯ ಹಾಗೂ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಸರ್ಕಾರ ಈ ಹೊಸ ಪ್ಲ್ಯಾನ್ ಮಾಡಿದ್ದು, ಬೆಳಗಾವಿಯಲ್ಲೇ ಮುಂಗಾರು ಅಧಿವೇಶನ ನಡೆಸಲು ತೀರ್ಮಾನಿಸಿದೆ ಎನ್ನಲಾಗಿದೆ.
ಅಧಿವೇಶನ ನಡೆಸುವ ಕುರಿತು ಸರ್ಕಾರದ ಮಟ್ಟದಲ್ಲಿ ಸಿದ್ಧತೆಗಳು ನಡೆಯುತ್ತಿರುವುದರಿಂದ, ಬೆಳಗಾವಿ ಜಿಲ್ಲಾಡಳಿತ ಕೂಡ ಈಗಿನಿಂದಲೇ ಎಚ್ಚೆತ್ತುಕೊಂಡಿದೆ. ಬೆಳಗಾವಿ ಜಿಲ್ಲಾಧಿಕಾರಿ (DC) ಮಹಮ್ಮದ್ ರೋಷನ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ಪ್ರಮುಖ ಪೂರ್ವಭಾವಿ ಸಭೆ ನಡೆದಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಈ ಸಭೆಯಲ್ಲಿ ಅಧಿವೇಶನದ ಸಿದ್ಧತೆಗಳ ಕುರಿತು ಮೊದಲ ಹಂತದ ಚರ್ಚೆ ನಡೆಸಲಾಗಿದೆ.
ಅಧಿವೇಶನಕ್ಕೆ ಆಗಮಿಸುವ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಮತ್ತು ಉನ್ನತ ಮಟ್ಟದ ಅಧಿಕಾರಿಗಳಿಗೆ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸುವುದು ಹಾಗೂ ಬಿಗಿ ಭದ್ರತೆ ಒದಗಿಸುವ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಶಿಂಧೆ, ನಗರ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕೆ. ರಾಮರಾಜನ್ ಸೇರಿದಂತೆ ಹಲವು ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಪಾಲ್ಗೊಂಡು ಅಗತ್ಯ ಸಲಹೆಗಳನ್ನು ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ಡಿಸೆಂಬರ್ನಲ್ಲಿ ನಡೆಯುತ್ತಿದ್ದ ಅಧಿವೇಶನ ಈ ಬಾರಿ ಮುಂಗಾರು ಮಳೆಯ ಅವಧಿಯಲ್ಲೇ ಬೆಳಗಾವಿಗೆ ಶಿಫ್ಟ್ ಆಗುತ್ತಿರುವುದು ರಾಜಕೀಯ ವಲಯದಲ್ಲೂ ಭಾರಿ ಕುತೂಹಲ ಮೂಡಿಸಿದೆ.
Laxmi News 24×7