ಬೆಳಗಾವಿ: ಶನಿವಾರ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ವಡ್ಡರ ಓಣಿಯ ಕಳಸನ್ನವರ ಪ್ಲಾಟ್ನಲ್ಲಿ ನಡೆದಿದ್ದ ಯುವಕನ ಭೀಕರ ಕೊಲೆ ಪ್ರಕರಣವನ್ನು ಪೊಲೀಸರು 24 ಗಂಟೆಯಲ್ಲೇ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ.
ಲಕ್ಷ್ಮಣ ಬಂಡಿವಡ್ಡರ (22) ಕೊಲೆಯಾದ ದುರ್ದೈವಿ. ಆರೋಪಿಗಳು ತಿಮ್ಮಣ್ಣನಿಗೆ ಚೂರಿಯಿಂದ ಬರ್ಬರವಾಗಿ ಇರಿದು ಪರಾರಿಯಾದ ತಕ್ಷಣ, ಆತ ರಕ್ತದ ಮಡುವಿನಲ್ಲೇ ಬಿದ್ದೂ ತನ್ನ ಸಂಬಂಧಿಕರ ಮನೆಗೆ ಫೋನ್ ಕರೆ ಮಾಡಿದ್ದನು. “ನನಗೆ ಯಾರೋ ಚಾಕು ಇರಿದಿದ್ದಾರೆ ಬನ್ನಿ” ಎಂದಿದ್ದಾನೆ.
ಗಾಬರಿಗೊಂಡ ಸಂಬಂಧಿಕರು ಸ್ಥಳಕ್ಕೆ ಓಡೋಡಿ ಬರುವಷ್ಟರಲ್ಲಿ ಅತಿಯಾದ ರಕ್ತಸ್ರಾವದಿಂದಾಗಿ ತಿಮ್ಮಣ್ಣ ಪ್ರಜ್ಞೆ ತಪ್ಪಿದ್ದನು. ತಕ್ಷಣವೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಆತ ಸಾವನ್ನಪ್ಪಿದ.
ಆರೋಪಿಗಳ ಪತ್ತೆಗಾಗಿ ಮೂಡಲಗಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಜಾಲ ಬೀಸಿದ್ದರು. ಈ ವೇಳೆ ಹತ್ಯೆಗೀಡಾದ ಯುವಕನ ಮೊಬೈಲ್ ಫೋನ್ಗೆ ಬಂದಿದ್ದ ಕೊನೆಯ ಕರೆಯನ್ನು ಬೆನ್ನಟ್ಟಿದ ತನಿಖಾಧಿಕಾರಿಗಳಿಗೆ ಕೊಲೆಯ ಇಂಚಿಂಚು ರಹಸ್ಯಗಳು ಬಿಚ್ಚಿಕೊಂಡಿವೆ.
ಮೃತ ತಿಮ್ಮಣ್ಣ ತನ್ನ ದೂರದ ಸಂಬಂಧದ ಹುಡುಗಿಯೊಬ್ಬಳನ್ನು ಗಾಢವಾಗಿ ಪ್ರೀತಿಸುತ್ತಿದ್ದನು. ವಿಷಯ ತಿಳಿದ ಯುವತಿಯ ಮನೆಯವರು ಆಕೆಗೆ ಬೇರೆ ಕಡೆ ಮದುವೆ ಮಾಡಿಕೊಟ್ಟಿದ್ದರು.
ಆದರೆ, ಮದುವೆಯಾದ ಮೇಲೂ ಆ ಯುವತಿ ತಿಮ್ಮಣ್ಣನ ಜೊತೆ ಫೋನ್ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ. ಇದರಿಂದ ತೀವ್ರ ಆಕ್ರೋಶಗೊಂಡ ಯುವತಿಯ ದೊಡ್ಡಪ್ಪನ ಮಗ ತಿಮ್ಮಣ್ಣನನ್ನು ಮುಗಿಸಲು ಸಂಚು ರೂಪಿಸಿದ್ದಾನೆ. ತನ್ನ ಮೂವರು ಅಪ್ರಾಪ್ತ ಸ್ನೇಹಿತರನ್ನು ಜೊತೆಗೂಡಿಸಿಕೊಂಡು ಒಟ್ಟು ನಾಲ್ವರ ತಂಡ ಹತ್ಯೆ ಎಸಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
Laxmi News 24×7