ಬೆಳಗಾವಿ : ಕೆಎಲ್ಇ ಆಸ್ಪತ್ರೆಯಲ್ಲಿ ಕಳೆದ 40 ವರ್ಷಗಳಿಂದ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಡಾ. ದಿನೇಶ್ ಭಟ್ಕಳ್ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಡಾ. ದಿನೇಶ್ ಲಕ್ಷ್ಮಣ ಭಟ್ಕಳ (79) ಆತ್ಮಹತ್ಯೆ ಮಾಡಿಕೊಂಡ ವೈದ್ಯ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನವರಾಗಿದ್ದು, ಹಲವು ವರ್ಷಗಳಿಂದ ವೈದ್ಯಕೀಯ ಸೇವೆ ಸಲ್ಲಿಸಿ ನಂತರ ಬೆಳಗಾವಿಯಲ್ಲಿ ನೆಲೆಸಿದ್ದರು.
ವಿಪರ್ಯಾಸವೆಂದರೆ ಸಾಯುವ ಮೊದಲು ವೈದ್ಯ ಕೆಎಲ್ಇ ಮಾಜಿ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರಿಗೆ ವಾಟ್ಸಪ್ ಸಂದೇಶ ಕಳುಹಿಸಿದ್ದಾರೆ. ಜೊತೆಗೆ ಆಪ್ತ ಸ್ನೇಹಿತರಿಗೂ ಈ ವೈದ್ಯ ಮೆಸೆಜ್ ಕಳುಹಿಸಿದ್ದಾರೆ.
ವೈದ್ಯ ದಿನೇಶ್ ಆತ್ಮಹತ್ಯೆಗೆ ಶರಣಾಗುವ ಮುನ್ನ ತಮ್ಮ ಹಿತೈಷಿಗಳು ಹಾಗೂ ಮಾರ್ಗದರ್ಶಕರಿಗೆ ವಾಟ್ಸಪ್ ಸಂದೇಶ ರವಾನಿಸಿದ್ದಾರೆ. ಅದರಲ್ಲಿ ಕೆಎಲ್ಇ ಮಾಜಿ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆಯವರಿಗೂ ಸಹ ವಾಟ್ಸಪ್ ಸಂದೇಶ ಕಳಿಸಿದ್ದಾರೆ. ‘ನನಗೆ ನೀವು ಇಷ್ಟು ವರ್ಷ ಸಹಾಯ ಮಾಡಿದ್ದೀರಿ. ಆದರೆ, ನನಗೆ ತೀವ್ರವಾದ ಎದೆ ನೋವಿದೆ. ಅದರಿಂದ ನಾನು ಬಳಲುತ್ತಿದ್ದೇನೆ. ಆದ್ದರಿಂದ ನಾನು ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ದಯವಿಟ್ಟು ನನ್ನ ಕುಟುಂಬಕ್ಕೆ ಸಹಾಯ ಮಾಡಿ. ನಗರ ಪೊಲೀಸ್ ಆಯುಕ್ತರಿಗೂ ಮಾಹಿತಿ ನೀಡಿ’ ಎಂದು ಸಂದೇಶ ಕಳುಹಿಸಿದ್ದಾರೆ.
ಡಾ. ದಿನೇಶ್ ಅವರ ಆತ್ಮಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ ನಾರಾಯಣ ಭರಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೆಳಗಾವಿಯ ಬೀಮ್ಸ್ ಆಸ್ಪತ್ರಗೆ ರವಾನಿಸಲಾಯಿತು.
Laxmi News 24×7