ಬೆಂಗಳೂರು: ಯಾವ ಆಟಗಾರ ಸ್ಟೇಡಿಯಂ ಕೇಳಿದ್ದರು ಅಂತ ಬೆಂಗಳೂರಲ್ಲಿ ಸ್ಟೇಡಿಯಂ ಮಾಡುತ್ತಿದ್ದೀರಿ? ಯಾವ ಪುರುಷಾರ್ಥಕ್ಕೆ ಆನೇಕಲ್ನಲ್ಲಿ ಮತ್ತೊಂದು ಸ್ಟೇಡಿಯಂ ಮಾಡುತ್ತಿದ್ದೀರಿ? ಕಮಿಷನ್ಗಾಗಿ ದುಡ್ಡು ಹೊಡೆಯಲು ಮಾಡುತ್ತಿರುವ ಸ್ಟೇಡಿಯಂ ಇದು ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಸರ್ಕಾರ ಆನೇಕಲ್ ಬಳಿ ಸ್ಟೇಡಿಯಂ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ.
ಸರ್ಕಾರ ಕೋಟಿ-ಕೋಟಿ ಹಣ ಬರುವ ಯೋಜನೆಗಳನ್ನು ಮಾಡಲು ಮುಂದಾಗುತ್ತಿದೆ. ನಾನು ನಿನ್ನೆ ಅಲ್ಲಿಗೆ ಭೇಟಿ ಕೊಟ್ಟಿದ್ದೆ. ಸೂರ್ಯ ಸಿಟಿಯಲ್ಲಿ ಮನೆಗಳನ್ನೇ ಹೆಚ್ಚಾಗಿ ಕಟ್ಟಿಲ್ಲ, 30 ವರ್ಷವಾದರೂ 95% ರಷ್ಟು ನಿವೇಶನಗಳು ಖಾಲಿ ಇವೆ. ಬಿಡದಿ ಟೌನ್ಶಿಪ್ ಸಹ ಇದೇ ರೀತಿ ಅಲ್ಲಿ ದುಡ್ಡು, ಜಮೀನು ನಿಕ್ಷೇಪ ಇದೆ ಅಂತ ಡಿಕೆಶಿ ಟೌನ್ಶಿಪ್ಗೆ ಮುಂದಾಗಿದ್ದಾರೆ ಎಂದು ದೂರಿದ್ದಾರೆ.
ಓಸಿಯಾಗಿ ರೈತರ ಜಮೀನು ಕಬಳಿಸಲು ಯತ್ನಿಸುತ್ತಿದ್ದಾರೆ. ರೈತರ ಸಮಾಧಿ ಮೇಲೆ ಟೌನ್ಶಿಪ್ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಬಿಡದಿ ಟೌನ್ಶಿಪ್ ಕೈಬಿಟ್ಟಿದ್ದೆವು. ಕಾಂಗ್ರೆಸ್ (Congress) ಸರ್ಕಾರವೂ ಬಿಡದಿ ಟೌನ್ಶಿಪ್ ಕೈಬಿಡಲಿ. 80% ರೈತರು ಬಿಡದಿ ಟೌನ್ಶಿಪ್ಗೆ ಒಪ್ಪಿದ್ದಾರೆ ಅನ್ನುವುದು ಸುಳ್ಳು, ಅವರೆಲ್ಲ ನಕಲಿ ರೈತರು. ಡಿಕೆಶಿ ಪ್ರಾಯೋಜಕತ್ವದಲ್ಲಿ ನಕಲಿ ರೈತರು ಒಪ್ಪಿದ್ದಾರೆ. ಆದರೆ, ಅಸಲಿ ರೈತರಿಗೆ ಭೂಮಿ ಕಳೆದುಕೊಳ್ಳಲು ಇಷ್ಟವಿಲ್ಲ. ಹಾಗಾಗಿ ಅಸಲಿ ರೈತರು ಬಿಡಸಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಲಾಡ್ಲೆ ಮಶಾಕ್ ದರ್ಗಾ ಪ್ರಕರಣಗಳನ್ನ ವಾಪಸ್ ಪಡೆದಿರುವ ಕುರಿತು ಮಾತನಾಡಿ, ಕೋಮುಗಲಭೆ ನಡೆಸಿದವರ ಮೇಲಿನ ಕೇಸ್ಗಳನ್ನ ವಾಪಸ್ ಪಡೆದಿರುವುದು ಅಕ್ಷಮ್ಯ. ಡಿಜೆ ಹಳ್ಳಿ ಕೆಜಿಹಳ್ಳಿ ಕೇಸ್ಗಳನ್ನ ಕೂಡ ವಾಪಸ್ ಪಡೆದಿದ್ದಾರೆ. ಇದು ಕಾಂಗ್ರೆಸ್ನ ವೋಟ್ ಪಾಲಿಟಿಕ್ಸ್, ಓಲೈಕೆ ರಾಜಕಾರಣ. ಸಂವಿಧಾನ ಬಾಹಿರವಾಗಿ ಕೇಸ್ಗಳನ್ನ ವಾಪಸ್ ಪಡೆದಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆಸಿದವರ ಮೇಲಿನ ಕೇಸ್ ವಾಪಸ್ ಪಡೆದಿದ್ದು ಸರಿಯಲ್ಲ. ಈ ಪ್ರವೃತ್ತಿ ದೇಶದ ಭದ್ರತೆಗೆ ಆತಂಕ ತರಲಿದೆ ಎಂದಿದ್ದಾರೆ.
ದಾವಣಗೆರೆ ಚುನಾವಣೆ ನಂತರ ಮುಸ್ಲಿಮರಿಗೆ ಸರ್ಕಾರ ಬಂಪರ್ ಗಿಫ್ಟ್ ಕೊಡುತ್ತಿದೆ. ಹಿಜಬ್ಗೆ ಪುನಃ ಅವಕಾಶ ಕೊಟ್ಟಿದ್ದಾರೆ. ಕಲ್ಲು ತೂರಾಟ ನಡೆಸಿದವರ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿದವರ ಕೇಸ್ ವಾಪಸ್ ಪಡೆಯಬಾರದು. ಸರ್ಕಾರ ಕೂಡಲೇ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿ. ಇಲ್ಲದಿದ್ದರೆ ಬಿಜೆಪಿ ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯಸಭೆ ಚುನಾವಣೆ ದಿನಾಂಕ ಘೋಷಣೆಯಾರುವ ಹಿನ್ನೆಲೆ ದೇವೇಗೌಡರ ಮರು ಆಯ್ಕೆ ಕುರಿತು ಮಾತನಾಡಿ, ದೇವೇಗೌಡರ ಮರು ಆಯ್ಕೆಗೆ ನಮ್ಮ ವಿರೋಧ ಇಲ್ಲ. ಯಾರ ಪರವೂ ನಮ್ಮ ತೀರ್ಮಾನ ಇಲ್ಲ, ಗೊಂದಲವೂ ಇಲ್ಲ. ನಮ್ಮ ಬಳಿ ಬಂದು ಯಾರೂ ಕೇಳಿಲ್ಲ. ರಾಜ್ಯ ಬಿಜೆಪಿ ನಾಯಕರ ಜೊತೆ ಜೆಡಿಎಸ್ ನಾಯಕರು ಇದರ ಬಗ್ಗೆ ಚರ್ಚೆ ಮಾಡಿಲ್ಲ. ಈ ಕುರಿತು ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ.
Laxmi News 24×7