ವಿಜಯಪುರ: ಮುಸ್ಲಿಮರ ಓಲೈಕೆ ಈ ಮಟ್ಟಕ್ಕೆ ಮಾಡುತ್ತಿರುವುದು ತಪ್ಪು, ಸಿದ್ದರಾಮಯ್ಯ ಅವರದ್ದು ಅತಿರೇಕ ಆಯ್ತು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ಹೊರಹಾಕಿದ್ದಾರೆ.
ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರದ್ದು ಅತಿರೇಕ ಆಯ್ತು. ಮುಸ್ಲಿಮರ ಓಲೈಕೆ ಈ ಮಟ್ಟಕ್ಕೆ ಮಾಡುತ್ತಿರುವುದು ತಪ್ಪು. ಮಾಜಿ ಸಂಸದರ ಮೇಲೆ ಕಲ್ಲು ತೂರಾಟ ಮಾಡಿದವರು, ಕೆಜಿ ಹಳ್ಳಿ, ಡಿಜೆ ಹಳ್ಳಿಯಲ್ಲಿ ಗಲಾಟೆ ಮಾಡಿದವರು, ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರ ಕೇಸ್ ಹಿಂಪಡೆದಿದ್ದಾರೆ. ಈಗ ರಾಜ್ಯ ಸರ್ಕಾರ ಲಾಡ್ಲೆ ಮಶಾಕ್ ಕೇಸ್ ಹಿಂಪಡೆದ ವಿಚಾರಕ್ಕೆ ಕಿಡಿಕಾರಿದ್ದಾರೆ.
ಇದು ಮತ್ತಷ್ಟು ಕ್ರೈಂಗೆ ಉತ್ತೇಜನ ಕೊಟ್ಟಂತಾಗುತ್ತೆ. ಇದನ್ನ ವಿರೋಧಿಸಬೇಕಾದ ರಾಜ್ಯ ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ವಿಜಯೇಂದ್ರ ಕೂಡ ಅನೇಕ ವಂಚನೆ, ನಕಲಿ ಸಹಿ ಮಾಡಿ ಹಣ ಲೂಟಿ ಹೊಡೆಸಿದ್ದಾನೆ. ಹೀಗಾಗಿ ಇಂತಹ ವಿಷಯಗಳ ಬಗ್ಗೆ ವಿರೋಧ ಮಾಡುವ ನೈತಿಕತೆ ವಿಜಯೇಂದ್ರ ಬಳಿ ಇಲ್ಲ ಎಂದಿದ್ದಾರೆ.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ಸಮೀಕ್ಷೆಗೆ ಇಬ್ಬರು ಬಂದಿದ್ದಾರೆ. ಅವರಿಬ್ಬರು ಪ್ರಾಮಾಣಿಕರಿದ್ದಾರೆ. ಪ್ರಾಮಾಣಿಕವಾಗಿ ಸಮೀಕ್ಷೆ ಮಾಡಿ ವರದಿ ಕೊಟ್ರೆ ಒಳ್ಳೆಯದಾಗುತ್ತೆ. ಇಲ್ಲಂದ್ರೆ ಮತ್ತೆ ವಿಜಯೇಂದ್ರನನ್ನೇ ಮುಂದುವರೆಸಿದ್ರೆ ಏನು ಮಾಡೋಕಾಗಲ್ಲ ಎಂದು ಹೇಳಿದ್ದಾರೆ.
ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಕೇವಲ 37 ಜನರನ್ನ ಮಾತ್ರ ಆಯ್ಕೆ ಮಾಡಿ ಅಭಿಪ್ರಾಯ ಕೇಳಿದ್ರೆ ಹೇಗೆ? ಎಲ್ಲ ಹಾಲಿ, ಮಾಜಿ ಶಾಸಕರು, ಮುಖಂಡರ ಅಭಿಪ್ರಾಯವನ್ನ ಪಡೆಯಬೇಕು. ವಿಜಯೇಂದ್ರ, ಯಡ್ಡಿಯೂರಪ್ಪ ನಾಲ್ಕು ಜನ ಸ್ವಾಮೀಜಿಗಳನ್ನ ಸಾಕಿದ್ದಾರೆ. ಅವರು ವಿಜಯೇಂದ್ರನನ್ನು ಇಳಿಸಿದ್ರೆ ನಾವು ಲಿಂಗಾಯತರು ಚುನಾವಣೆಯಲ್ಲಿ ಬೆಂಬಲಿಸಲ್ಲ ಅಂತಾ ಅಮಿತ್ ಶಾ ಅವರಿಗೆ ಫೋನ್ ಮಾಡಿಸ್ತಾರೆ. ಅವರ ಮಾತು ಕಟ್ಟಿಕೊಂಡು ಮೋದಿ ಅವರು ಸುಮ್ಮನೆ ಕೂರಬಾರದು ಎಂದು ತಿಳಿಸಿದ್ದಾರೆ.
ಸದ್ಯ ಬಿಜೆಪಿ ರಾಜ್ಯ ಪದಾಧಿಕಾರಿಗಳು ಬಹುತೇಕರು ವಿಜಯೇಂದ್ರನ ಚೇಲಾಗಳಿದ್ದಾರೆ. ಪಿ.ರಾಜು, ತಳಕೇರಿ ಸೇರಿದಂತೆ ಎಲ್ಲರು ಅವನ ಚೇಲಾಗಳೇ. ಹೀಗಾಗಿ ಅವರಿಂದ ಅಭಿಪ್ರಾಯ ಕೇಳಿದ್ರೆ ವಿಜಯೇಂದ್ರಗೆ ಜೈ ಅಂತಾರೆ ಅಷ್ಟೆ ಎಂದು ವಾಗ್ದಾಳಿ ನಡೆಸಿದ್ದಾರೆ.
Laxmi News 24×7