ಲಕ್ನೋ: ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ರಾಮ ಜನ್ಮಭೂಮಿ – ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ಪ್ರಮುಖ ಹಾಗೂ ಹಿರಿಯ ಮುಸ್ಲಿಂ ಅರ್ಜಿದಾರರಾದ ಇಕ್ಬಾಲ್ ಅನ್ಸಾರಿ ಮನವಿ ಮಾಡಿದರು.
ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಕೇಂದ್ರ ಸರ್ಕಾರವು ಗೋವಿಗೆ ರಾಷ್ಟ್ರೀಯ ಸ್ಥಾನಮಾನ ನೀಡುವಂತೆ ಮನವಿ ಮಾಡಿದರು. ಅಲ್ಲದೇ ಮುಸ್ಲಿಮರು ಗೋವುಗಳನ್ನು ಗೌರವಿಸಬೇಕು, ಅವುಗಳ ಗೋಹತ್ಯೆಯನ್ನು ನಿಲ್ಲಿಸಬೇಕು. ಏಕೆಂದ್ರೆ, ಗೋಹತ್ಯೆಯ ವಿಚಾರವನ್ನೇ ಮುಂದಿಟ್ಟುಕೊಂಡು ಕೋಮುಗಲಭೆ ಸೃಷ್ಟಿಸುವ ಹಾಗೂ ಸಮುದಾಯವನ್ನು ಕೆಣಕುವ ಕೆಲಸಗಳಾಗುತ್ತಿವೆ ಎಂದು ಅಸಮಾಧಾನ ಹೊರಹಾಕಿದರು.
ಭಾರತದಲ್ಲಿ ಗೋವುಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವನ್ನು ಒತ್ತಿ ಹೇಳಿದ ಅನ್ಸಾರಿ, ಬಹುಸಂಖ್ಯಾತ ಸಮುದಾಯಗಳ ಭಾವನೆಗಳನ್ನು ಗೌರವಿಸಬೇಕು, ಗೋವನ್ನು ಬಲಿಕೊಡಲೇಬಾರದು (ಕುರ್ಬಾನಿ). ಏಕೆಂದ್ರೆ ನಾವು ಭಾರತೀಯರು, ಗೋವನ್ನು ʻಗೋಮಾತೆʼ ಎಂದು ಕರೆಯುತ್ತೇವೆ, ಹಿಂದೂಗಳು ಅದನ್ನು ಪೂಜಿಸುತ್ತಾರೆ. ಹಾಗಾಗಿ ಮುಸ್ಲಿಮರು ಗೋವುಗಳನ್ನು ಗೌರವಿಸಬೇಕು, ಇಸ್ಲಾಮಿಕ್ ಸಂಪ್ರದಾಯಗಳು ಗೋಮಾಂಸ ಸೇವನೆಯನ್ನ ಉತ್ತೇಜಿಸುವುದಿಲ್ಲ ಎಂದು ಹೇಳಿದರು.
ಗೋವಿನ ಹಾಲು ಪ್ರಯೋಜನಕಾರಿ ಮತ್ತು ಔಷಧಿಯ ಗುಣಗಳ ಆಗರವಾಗಿದೆ. ಹಸುವಿನ ಮಾಂಸ ತಿನ್ನುವುದನ್ನು ನಮ್ಮ ಇಸ್ಲಾಂ ಧರ್ಮ ನಿಷೇಧಿಸಿದೆ. ಆದಾಗ್ಯೂ ಕೆಲವರು ನಮ್ಮ ದೇಶದಲ್ಲಿ ಮುಸ್ಲಿಮರನ್ನು ಕೆಣಕಲು ಇದೆಲ್ಲವನ್ನ ಮಾಡ್ತಿದ್ದಾರೆ. ಮುಸ್ಲಿಮರೆಲ್ಲರೂ ಎಚ್ಚೆತ್ತುಕೊಂಡು ಗೋಹತ್ಯೆಯನ್ನು ನಿಲ್ಲಿಸಬೇಕು ಎಂದು ಕರೆ ನೀಡಿದರು.
ಕೋಲ್ಕತ್ತಾದ ನಖೋಡಾ ಮಸೀದಿಯ ಇಮಾಮ್ ಮೌಲಾನಾ ಮೊಹಮ್ಮದ್ ಶಫೀಕ್ ಖಾಸ್ಮಿ ಅವರು ಇದೇ ರೀತಿ ಮನವಿ ಮಾಡಿದ ಒಂದು ದಿನದ ನಂತರ ಇಕ್ಬಾಲ್ ಅನ್ಸಾರಿ ಅವರು ಹೇಳಿಕೆ ನೀಡಿದ್ದಾರೆ.
Laxmi News 24×7