ಮೈಸೂರು: ಸಾಲದ ಹಣ ಕೇಳಲು ಹೋದ ವ್ಯಕ್ತಿ ಮೇಲೆ ಹಲ್ಲೆ ಆರೋಪದಲ್ಲಿ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಿರುದ್ಧ ಎಫ್ಐಆರ್ ದಾಖಲಾಗಿದೆ. 55 ಲಕ್ಷ ಹಿಂದಿರುಗಿಸದ ಆರೋಪ ವಿಶ್ವನಾಥ್ ಮೇಲಿದೆ. ಸಾಲದ ಹಣ ವಾಪಸ್ ಕೇಳಲು ಹೋದ ವ್ಯಕ್ತಿ ಮೇಲೆ ವಿಧಾನ ಪರಿಷತ್ ಸದಸ್ಯ ಅಡಗೂರು ವಿಶ್ವನಾಥ್ ಹಲ್ಲೆ ನಡೆಸಿದ್ದಾರೆ ಎಂದು ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ವಿಶ್ವನಾಥ್ ಇರುವಾಗ ಹಣ ಕೇಳಲು ಹೋದ ವೇಳೆ ಈ ಘಟನೆ ನಡೆದಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದರೆಂದು ಕಾಂಗ್ರೆಸ್ ಮುಖಂಡ ಕೋಟೆಹುಂಡಿ ಮಹದೇವು ಆರೋಪಿಸಿ ದೂರು ನೀಡಿದ್ದಾರೆ.
ನ್ಯಾಯಾಲಯದ ಆದೇಶದಂತೆ ಪ್ರಕರಣ ದಾಖಲಾಗಿದೆ. 2013ರಲ್ಲಿ ವಿಶ್ವನಾಥ್ ಎಂಪಿ ಆಗಿದ್ದಾಗ ಕೋಟೆಹುಂಡಿ ಮಹದೇವು, MTB ನಾಗರಾಜ್ ಮುಖಾಂತರ ವಿಶ್ವನಾಥ್ ಹಾಗೂ ಮಗ ಅಮಿತ್ ದೇವರಹಟ್ಟಿ ಅವರಿಗೆ 55 ಲಕ್ಷ ನೀಡಿದ್ದಾರೆ. ಹಣ ಹಿಂದಿರುಗಿಸುವುದಾಗಿ ಸಾಲ ಪಡೆದ ವಿಶ್ವನಾಥ್ ಸತಾಯಿಸಿದ್ದಾರೆ. ಈ ಬಗ್ಗೆ 2026ರ ಫೆಬ್ರವರಿಯಲ್ಲಿ ವಿಶ್ವನಾಥ್ ಅವರು ಜಲದರ್ಶಿನಿಯಲ್ಲಿ ಇರುವಾಗ ಕೋಟೆಹುಂಡಿ ಮಹದೇವು ಹಣ ಕೇಳಲು ಹೋದಾಗ ಅವಾಚ್ಯ ಪದಗಳಿಂದ ನಿಂದಿಸಿ ಕೈಯಲ್ಲಿ ತಲೆಗೆ ಹೊಡೆದಿದ್ದಾರೆ.
ಈ ಬಗ್ಗೆ ಕೋಟೆಹುಂಡಿ ಮಹದೇವು ಅವರು ದೇವರಾಜ ಪೊಲೀಸ್ ಠಾಣೆಯಲ್ಲಿ ಎನ್ಸಿಆರ್ ದಾಖಲಿಸಿದ್ದರು. ನಂತರ ಘನ ನ್ಯಾಯಾಲಯದ ಮೊರೆಹೋಗಿ ಪ್ರಕರಣ ದಾಖಲಿಸುವಂತೆ ಆದೇಶ ತಂದಿದ್ದಾರೆ.
Laxmi News 24×7