ಹೊನ್ನಾವರ: ಪಟ್ಟಣದ ಹೃದಯಭಾಗದಲ್ಲಿರುವ ಸೂಪರ್ ಮಾರ್ಕೆಟ್ನಲ್ಲಿ ನಗದು ಹಾಗೂ ಎನ್ವಿಆರ್ (NVR) ಕಳ್ಳತನ ಮಾಡಿದ್ದ ಆರೋಪಿಯನ್ನು ಹೊನ್ನಾವರ ಪೊಲೀಸರು ಕೇವಲ 48 ಗಂಟೆಗಳ ಕಾರ್ಯಾಚರಣೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೊನ್ನಾವರ ಬಸ್ ನಿಲ್ದಾಣದ ರಸ್ತೆಯಲ್ಲಿರುವ ಎ.ಆರ್.ಎಮ್ (ARM) ಸೂಪರ್ ಮಾರ್ಕೆಟ್ನಲ್ಲಿ ಕಳೆದ ಏಪ್ರಿಲ್ 16 ರಂದು ಕಳ್ಳತನ ನಡೆದಿತ್ತು. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ-2023ರ ವಿವಿಧ ಕಲಂ ಅಡಿ ಪ್ರಕರಣ ದಾಖಲಾಗಿತ್ತು.
ಉತ್ತರಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ದೀಪನ್ ಎಮ್. ಎನ್. (IPS) ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪಿ.ಎಸ್.ಐ ಮಹಾಂತೇಶ ವಾಲ್ಮೀಕಿ ಹಾಗೂ ತಂಡವು, ಜಿಲ್ಲಾ ಬೆರಳಚ್ಚು ವಿಭಾಗದ ತಾಂತ್ರಿಕ ನೆರವಿನೊಂದಿಗೆ ಆರೋಪಿಯ ಬೆನ್ನತ್ತಿದ್ದರು. ದಿನಾಂಕ 19-04-2026 ರಂದು ಮಧ್ಯಾಹ್ನ ಕುಮಟಾದ ಸಿತಾರಾ ಹೋಟೆಲ್ ಎದುರು ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು.
ಬಂಧಿತನನ್ನು ದಾಂಡೇಲಿಯ ಸುಭಾಷನಗರದ ನಿವಾಸಿ, 27 ವರ್ಷದ ಮುಜಾಫರ್ ಶೇಖ್ ಎಂದು ಗುರುತಿಸಲಾಗಿದೆ. ಹೋಟೆಲ್ ಕೆಲಸ ಮಾಡಿಕೊಂಡಿದ್ದ ಈತ ಸೂಪರ್ ಮಾರ್ಕೆಟ್ನಲ್ಲಿ ಕಳ್ಳತನ ಎಸಗಿದ್ದು, ಪೊಲೀಸರು ಆರೋಪಿಯಿಂದ ಕಳುವಾದ ಸ್ವತ್ತನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ.
ಪ್ರಕರಣ ದಾಖಲಾದ ಕೇವಲ 48 ಗಂಟೆಗಳ ಅವಧಿಯಲ್ಲಿ ಆರೋಪಿಯನ್ನು ಪತ್ತೆಹಚ್ಚಿದ ಹೊನ್ನಾವರ ಪೊಲೀಸ್ ನಿರೀಕ್ಷಕರು, ಪಿ.ಎಸ್.ಐಗಳಾದ ಮಹಾಂತೇಶ ವಾಲ್ಮೀಕಿ, ಮಂಜುನಾಥ ಮತ್ತು ಸಿಬ್ಬಂದಿಗಳಾದ ರವಿ ಎಚ್. ನಾಯ್ಕ ಹಾಗೂ ವಿನಾಯಕ ದುರ್ಗದ ಅವರ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
Laxmi News 24×7