ದಾವಣಗೆರೆ: ರಂಜಾನ್ ಪ್ರಾರ್ಥನೆ ಮಾಡುವ ವೇಳೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಐವರು ಗಂಭೀರ ಗಾಯಗೊಂಡಿರುವ ಘಟನೆ ದಾವಣಗೆರೆ ತಾಲೂಕಿನ ಆನಗೋಡು ಬಳಿ ನಡೆದಿದೆ.
ರಂಜಾನ್ ಪ್ರಯುಕ್ತ ಸುಮಾರು 800ಕ್ಕೂ ಅಧಿಕ ಮುಸ್ಲಿಂ ಬಾಂಧವರು ಆನಗೋಡು ಬಳಿಯ, ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲಿ ಇರುವ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸುವ ವೇಳೆ ಹೆಜ್ಜೇನು ಗೂಡಿಗೆ ಕೆಲ ಯುವಕರು ಕಲ್ಲು ಹೊಡೆದಿದ್ದಾರೆ. ಈ ಪರಿಣಾಮ ಏಕಾಏಕಿ ಹೆಜ್ಜೇನು ದಾಳಿ ನಡೆಸಿದೆ.
ಹೆಜ್ಜೇನು ದಾಳಿ ಮಾಡುತ್ತಿದ್ದಂತೆ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಯುವಕರು ಮಕ್ಕಳು ಹೆಣ್ಣು ಮಕ್ಕಳ ಮೇಲೆ ಹೆಜ್ಜೇನು ದಾಳಿ ಮಾಡಿದ್ದು, ಸುಮಾರು 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಗೆ ಒಳಗಾದವರ ಪೈಕಿ ಐವರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಯಕೊಂಡ ಶಾಸಕ ಬಸವಂತಪ್ಪ ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ.
ಹೆಜ್ಜೇನು ದಾಳಿ ನಡೆಸುತ್ತಿದ್ದಂತೆ ಒಣ ಹುಲ್ಲಿಗೆ ಬೆಂಕಿ ಹಾಕಿ ಹೊಗೆ ಮೂಲಕ ಸ್ಥಳೀಯರು ಜೇನು ಹುಳ ಓಡಿಸಿದ್ದಾರೆ. ವೃದ್ಧರು, ಮಕ್ಕಳು ಸೇರಿದಂತೆ ಘಟನೆಯಲ್ಲಿ 80ಕ್ಕೂ ಅಧಿಕ ಜನರ ಮೇಲೆ ದಾಳಿ ನಡೆದಿದೆ. ಐವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದು, ಉಳಿದವರಿಗೆ ಎಮರ್ಜೆನ್ಸಿ ಹಾಗೂ ಸಾಮಾನ್ಯ ವಾರ್ಡ್ನಲ್ಲಿ ಚಿಕಿತ್ಸೆ ಮುಂದುವರಿದಿದೆ.
Laxmi News 24×7