ಬಾಗಲಕೋಟೆ: ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದ ವೇಳೆ ಪಂಕಾ ಮಸೀದಿಯಲ್ಲಿ ಇದ್ದವರೆಲ್ಲರ ಮೇಲೂ ಪ್ರಕರಣ ದಾಖಲಿಸಬೇಕು ಎಂದು ಹಿಂದೂ ಜಾಗರಣ ವೇದಿಕೆಯ ಉತ್ತರ ಪ್ರಾಂತ ಸಹ ಸಂಚಾಲಕ ಶ್ರೀಕಾಂತ ಹೊಸಕೆರೆ ಆಗ್ರಹಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಸೀದಿಯಲ್ಲಿ ಸೇರಲು ಅಷ್ಟೊಂದು ಜನರಿಗೆ ಅವಕಾಶ ಮಾಡಿಕೊಟ್ಟ ಪಂಕಾ ಮಸೀದಿಯ ಕಮಿಟಿಯವರೆಲ್ಲರ ಮೇಲೆ ಪ್ರಕರಣ ದಾಖಲಿಸಿ, ಬಂಧಿಸಬೇಕು. ಆ ಮಸೀದಿಯಲ್ಲಿ ಸೇರುವವರಿಂದಲೇ ಈ ಹಿಂದೆಯೂ ಗಲಾಟೆಯಾಗಿದೆ ಎಂದು ಆರೋಪಿಸಿದರು.
ಬಾಗಲಕೋಟೆಯ ಅಶಾಂತಿಗೆ ಕಾರಣವಾಗುತ್ತಿರುವ ಆ ಮಸೀದಿಯನ್ನು ತಕ್ಷಣ ಜಿಲ್ಲಾಡಳಿತ ಬಂದ್ ಮಾಡಬೇಕು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ, ನೂರಾರು ಪೊಲೀಸರಿದ್ದಾಗ ಕಲ್ಲು, ಚಪ್ಪಲಿ ಎಸೆತದ ಪ್ರಕರಣ ನಡೆದಿದೆ. ಚಪ್ಪಲಿ ಎಸೆದವರನ್ನು ಬಿಟ್ಟು, ಮೆರವಣಿಗೆಯಲ್ಲಿದ್ದವರ ಮೇಲೆ ಲಾಠಿ ಬೀಸುವ ಕೆಲಸ ಮಾಡಿದ್ದಾರೆ. ರಾಜಕಾರಣಿಗಳು ಹೇಗೆ ಮುಸ್ಲಿಮರನ್ನು ತುಷ್ಟೀಕರಣ ಮಾಡುತ್ತಾರೋ, ಹಾಗೆಯೇ ಎಸ್ಪಿ ಅವರೂ ತುಷ್ಟೀಕರಣ ಮಾಡುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ದೂರಿದರು.
ಉದ್ದೇಶಪೂರ್ವಕವಾಗಿ ಮಸೀದಿಯಲ್ಲಿ ಸೇರಿದ್ದಾಗಲೂ ಅವರನ್ನು ಪೊಲೀಸರು ಹೊರ ಹಾಕುವ ಕೆಲಸವನ್ನು ಮಾಡಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠರ ನೇತೃತ್ವದಲ್ಲಿ ಬಂದೋಬಸ್ತ್ ಮಾಡಿದಾಗಲೂ ಘಟನೆ ನಡೆದಿದೆ. ಪೊಲೀಸರ ನಿರ್ಲಕ್ಷ್ಯದಿಂದ ಕಲ್ಲು ಎಸೆದಿದ್ದಾರೆ. ಆದ್ದರಿಂದ ಎಸ್ಪಿ ವಿರುದ್ಧ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳಬೇಕು. ಮತಾಂಧರಿಗೆ ಬೆಂಬಲ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಹಿಂದೂ ಸಮಾಜ ದುಷ್ಟಶಕ್ತಿಗಳ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಬಾಗಲಕೋಟೆಯ ನವನಗರದಲ್ಲಿ ಅಕ್ರಮವಾಗಿ ಮಸೀದಿಗಳ ನಿರ್ಮಾಣ ಮಾಡಲಾಗುತ್ತಿದೆ. ಮಸೀದಿಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು. ಅವುಗಳ ನಿರ್ವಹಣೆಯನ್ನು ನಗರಸಭೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಕುಮಾರಸ್ವಾಮಿ ಹಿರೇಮಠ, ಕಿರಣ ಪವಾಡಶೆಟ್ಟರ್, ವೆಂಕಣ್ಣ ಕಳ್ಳಿಗುಡ್ಡ, ಕಾಂತು ವಿಜಾಪುರ, ಶರಣು ಗೌಡರ, ಮಲ್ಲು ಕೋಟಿ ಇದ್ದರು.
Laxmi News 24×7