ಬೆಂಗಳೂರು: ‘ಬಾಗಲಕೋಟೆಯಲ್ಲಿ ಮೆರವಣಿಗೆ ಬಗ್ಗೆ ಸ್ಥಳೀಯವಾಗಿ ನೋಡಿಕೊಂಡು ತೀರ್ಮಾನ ಮಾಡುವಂತೆ ಸೂಚಿಸಿದ್ದೇನೆ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಾಗಲಕೋಟೆ ಈಗ ಶಾಂತವಾಗಿದೆ. ಪೊಲೀಸ್ ತಕ್ಷಣ ಕಾರ್ಯಪ್ರವೃತ್ತರಾಗಿದ್ದರಿಂದ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ.
ಮೆರವಣಿಗೆ ಬಗ್ಗೆ ಸ್ಥಳೀಯವಾಗಿ ನೋಡಿಕೊಂಡು ತೀರ್ಮಾನ ಮಾಡುವಂತೆ ಸೂಚಿಸಿದ್ದೇನೆ ಎಂದರು.
ಹಿರಿಯ ಎಡಿಜಿಪಿಯನ್ನು ಕಳುಹಿಸಿದ್ದೇನೆ. ಸಾಕಷ್ಟು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಶಾಂತಿಸಭೆ ನಿರ್ದೇಶನ ನೀಡಲಾಗಿದೆ ಎಂದ ಅವರು, ಘಟನೆಯಲ್ಲಿ ಪೊಲೀಸರಿಗೂ ಏಟು ಬಿದ್ದಿದೆ. ಆದರೂ ಸಮಾಧಾನದಿಂದ ಇದ್ದಾರೆ. ಈಗಾಗಲೇ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಶಾಂತಿ-ಸೌಹಾರ್ದತೆ ಕಾಪಾಡಲು ಸೂಚಿಸಲಾಗಿದೆ ಎಂದು ಹೇಳಿದರು.
ಕಲ್ಲು ತೂರಿದವರು ಪತ್ತೆ:
ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ‘ಪ್ರಕರಣದಲ್ಲಿ ಈಗಾಗಲೇ ಕಲ್ಲು ತೂರಾಟ ಯಾರು ಮಾಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಕಾನೂನು ಮತ್ತು ಸಂವಿಧಾನ ಎಲ್ಲರಿಗೂ ಒಂದೇ. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಆಗಲಿದೆ’ ಎಂದು ಸ್ಪಷ್ಟಪಡಿಸಿದರು.
Laxmi News 24×7