ಬೆಳಗಾವಿ:ಬೇರೆ ರಾಜ್ಯದ ಕೆಲ ವಿದ್ಯಾರ್ಥಿಗಳು ನಕಲಿ ರಹವಾಸಿ, ಜಾತಿ ಹಾಗೂ ಇತರೆ ನಕಲಿ ದಾಖಲೆಗಳನ್ನು ಸಲ್ಲಿಸಿ ನಗರದಲ್ಲಿ ಶೈಕ್ಷಣಿಕ ಪ್ರವೇಶ, ವಸತಿ ಸೌಲಭ್ಯ, ಸರ್ಕಾರಿ ಹಾಗೂ ಅರೆ ಸರ್ಕಾರಿ ಉದ್ಯೋಗ ಸಹಿತ ಹಲವು ಸೌಲಭ್ಯ ಪಡೆಯುತ್ತಿದ್ದು, ಇದರ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣ ಆಗ್ರಹಿಸಿದೆ.
ಈ ಸಂಬಂಧ ವೇದಿಕೆಯ ಜಿಲ್ಲಾ ಅಧ್ಯಕ್ಷ ದೀಪಕ ಗುಡಗನಟ್ಟಿ ಡಿಸಿಪಿ ನಾರಾಯಣ ಬರಮನಿಗೆ ಸುದೀರ್ಘವಾದ ಮಾಹಿತಿವುಳ್ಳ ಮನವಿಯೊಂದನ್ನು ಸಲ್ಲಿಸಿದ್ದಾರೆ.
ಮಧ್ಯವರ್ತಿಗಳ ಮೂಲಕ ನಕಲಿ ದಾಖಲೆಗಳನ್ನು ಪಡೆದುಕೊಂಡು ಈ ರೀತಿ ಮಾಡುವುದು ಅಕ್ರಮ ಚಟುವಟಿಕೆಯಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆಗೂ ವಿರುದ್ಧವಾಗಿದೆ. ಇದರಿಂದ ಸ್ಥಳೀಯ ಯುವಕರ ಅವಕಾಶಗಳನ್ನು ಕಸಿದುಕೊಳ್ಳುತ್ತಿದ್ದು, ಅನ್ಯಾಯವಾಗುತ್ತಿದೆ. ಪೊಲೀಸ್ ದೃಢೀಕರಣ (ವೆರಿಫಿಕೇಶನ್) ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಸಮರ್ಪಕ ಹಾಗೂ ಕೂಲಂಕುಶವಾಗಿ ಅರ್ಜಿದಾರರ ನಿವಾಸ, ದಾಖಕೆ ಪ್ರಾಮಾಣಿಕತೆ ಹಾಗೂ ಹಿನ್ನೆಲೆಯನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಿಸಿದ ಶೈಕ್ಷಣಿಕ ಸಂಸ್ಥೆಗಳು, ವಸತಿ ಗೃಹಗಳು ಹಾಗೂ ಉದ್ಯೋಗ ಸಂಬಂಧಿತ ದಾಖಲೆಗಳಲ್ಲಿ ಸಮಗ್ರ ಪರಿಶೀಲನೆ ನಡೆಸಿ, ನಕಲಿ ಪ್ರಮಾಣ ಪತ್ರಗಳನ್ನು ಬಳಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Laxmi News 24×7