ಬೆಳಗಾವಿ : ಜಿಲ್ಲಾ ಆಸ್ಪತ್ರೆ ಶುಶ್ರೂಷಕರೊಬ್ಬರ ಮೇಲೆ ರೋಗಿಯ ಸಂಬಂಧಿಗಳು ಹಲ್ಲೆ ಮಾಡಿದ್ದಾರೆನ್ನಲಾದ ಘಟನೆ ಖಂಡಿಸಿ ಇಲ್ಲಿನ ಬಿಮ್ಸ್ ಆಸ್ಪತ್ರೆಯ ಶುಶ್ರೂಷಕರು ಬುಧವಾರ ಕೆಲಹೊತ್ತು ತಮ್ಮ ಸೇವೆ ಸ್ಥಗಿತಗೊಳಿಸಿ ತುರ್ತು ನಿಗಾ ಘಟಕದ ಎದುರು ಪ್ರತಿಭಿಟಿಸಿದರು.
ಮಂಗಳವಾರ ಸಂಜೆ ತನ್ನ ವಾರ್ಡ್ ಬಿಟ್ಟು ಬೇರೊಂದು ವಾರ್ಡ್ಗೆ ಬಂದಿದ್ದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರನ್ನು ಪ್ರಶ್ನಿಸಿದ್ದ ಸ್ಪಾಫ್ ನರ್ಸ್ ಬಸವರಾಜ ಕಬಾಡಗಿ, ಮಹಿಳೆಯ ಕೈ ಹಿಡಿದು ವಾರ್ಡ್ಗೆ ಹೋಗುವಂತೆ ಹೇಳಿದ್ದರಂತೆ. ಇದೇ ವಿಷಯಕ್ಕೆ ಆಕೆಯ ಸಂಬಂಧಿಗಳು ಆಸ್ಪತ್ರೆಗೆ ಬಂದು ಹಲ್ಲೆ ಮಾಡಿದ್ದಾರೆ. ಇದರಿಂದ ನಾವು ಭಯದಲ್ಲಿ ಕೆಲಸ ಮಾಡುವಂತಾಗಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಆಗಾಗ ಆಸ್ಪತ್ರೆಯಲ್ಲಿ ಈ ರೀತಿಯ ಘಟನೆಗಳು ಮರುಕಳಿಸುತ್ತಿದ್ದು, ನಿರ್ಭಿತೆಯಿಂದ ಕೆಲಸ ಮಾಡಲಾಗದ ಸ್ಥಿತಿ ಇದೆ. ಈ ಬಗ್ಗೆ ಕಠಿಣ ಕ್ರಮವಾಗಬೇಕು. ಬಿಮ್ಸ್ ವತಿಯಿಂದಲೂ ದೂರು ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು ಎಂದು ಪಟ್ಟು ಹಿಡಿದರು.
ಕೊನೆಗೆ ಸ್ಥಳಕ್ಕಾಗಮಿಸಿದ ಬಿಮ್ಸ್ ನಿರ್ದೇಶಕ ಅಶೋಕ ಶೆಟ್ಟಿ, ಬಿಮ್ಸ್ ವತಿಯಿಂದ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾಧಿಕಾರಿಗೆ ದೂರು ಪತ್ರ ಕಳುಹಿಸಲಾಗುವುದು. ಈಗಾಗಲೇ ಬಿಮ್ಸ್ನಿಂದ ಎಪಿಎಂಸಿ ಠಾಣೆಗೂ ದೂರು ದಾಖಲಿಸಿದ್ದೇವೆ. ಹಲ್ಲೆಗೊಳಗಾದ ಬಸವರಾಜ ಮೂಲಕವೂ ವೈಯಕ್ತಿಕ ಎಫ್ಐಆರ್ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
ಈ ಭರವಸೆ ಹಿನ್ನೆಲೆ ಪ್ರತಿಭಟನೆ ವಾಪಸ್ಸು ಪಡೆದುಕೊಂಡು ಶುಶ್ರೂಷಕರು, ಒಂದು ವೇಳೆ ಹಲ್ಲೆ ಮಾಡಿದವರ ವಿರುದ್ಧ ಎಫ್ಐಆರ್ ದಾಖಲಾಗಿ ಕ್ರಮ ಕೈಗೊಳ್ಳದಿದ್ದಲ್ಲಿ ಪುನಃ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
Laxmi News 24×7