ಬೆಳಗಾವಿಯ ಶಹಾಪುರದಲ್ಲಿರುವ ಸ್ಮಶಾನದಲ್ಲೇ ಶಿವರಾತ್ರಿಯ ಜಾಗರಣೆ ನಡೆಯುತ್ತದೆ. ಹಬ್ಬ-ಹರಿದಿನಗಳಲ್ಲೂ ಜನ ಬರುತ್ತಾರೆ.
ಅಕ್ಷರಶಃ ಸ್ಮಶಾನಪ್ರಿಯ ಶಿವನ ನಿಜ ಆರಾಧನೆ ಇಲ್ಲಿ ನಡೆಯುತ್ತದೆ. ಶಹಾಪುರ ಮುಕ್ತಿಧಾಮ ವೈರಾಗ್ಯದ ತಾಣವನ್ನು ಭಕ್ತಿ ಕ್ಷೇತ್ರವನ್ನಾಗಿ ಬದಲಾಯಿಸಿದೆ. ಉತ್ತಮ ಉದ್ಯಾನ ಜನಮೆಚ್ಚುಗೆಗೆ ಪಾತ್ರವಾಗಿದೆ. ಸ್ಥಳೀಯ ಸಮಾಜಸೇವಕರು ಸೇರಿ 28 ವರ್ಷಗಳ ಹಿಂದೆ ಮುಕ್ತಿಧಾಮ ಸೇವಾ ಸುಧಾರಣಾ ಮಂಡಳಿ ಸ್ಥಾಪಿಸಿ, ಶಿವನ ಮಂದಿರ ನಿರ್ಮಿಸಿ, ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಮಹಾನಗರ ಪಾಲಿಕೆ ಅನುದಾನವಿಲ್ಲದೆ ಈ ಮಂಡಳಿಯೇ ಸ್ಮಶಾನವನ್ನು ಮಾದರಿ ಮುಕ್ತಿಧಾಮವನ್ನಾಗಿ ಸುಧಾರಣೆ ಮಾಡಿದೆ.
ಇಲ್ಲಿರುವ ಶಿವಾಲಯಕ್ಕೆ ಬೆಳಗಾವಿಯ ಜನ ಶಿವರಾತ್ರಿಯಂದು ಬಂದು ದರ್ಶನ ಪಡೆಯುತ್ತಾರೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪೂಜೆ ನಡೆಯುತ್ತದೆ. ಕೆಲ ಸಲ ಒಂದೆಡೆ ಅಂತ್ಯಸಂಸ್ಕಾರ ವಿಧಿವಿಧಾನಗಳು ನಡೆಯುತ್ತಿದ್ದರೂ, ಇದೇ ಪರಿಸರದಲ್ಲಿ ಶಿವನ ಆರಾಧನೆ ಯಥಾಸ್ಥಿತಿಯಲ್ಲಿರುತ್ತದೆ. ಪ್ರತಿ ವರ್ಷವೂ ಮಹಾಶಿವರಾತ್ರಿಯಂದು ಈ ಸ್ಮಶಾನದಲ್ಲಿ ನಡೆಯುವ ಶಿವಜಾಗರಣೆಗೆ ಸಹಸ್ರಾರು ಭಕ್ತರು ಸೇರುತ್ತಾರೆ. ಅಮಾವಾಸ್ಯೆಗೆ ಶಿವನ ದರ್ಶನಕ್ಕಾಗಿ ಸ್ಮಶಾನದ ಮುಂದೆ ಭಕ್ತರು ಸಾಲಿನಲ್ಲಿ ನಿಲ್ಲುತ್ತಾರೆ.
ಮಕ್ಕಳು ಭಾಗಿ:
ಮಕ್ಕಳನ್ನು ಸಾಮಾನ್ಯವಾಗಿ ಸ್ಮಶಾನಕ್ಕೆ ಕರೆದುಕೊಂಡು ಬರುವುದಿಲ್ಲ. ಆದರೆ, ಇಲ್ಲಿನ ಸ್ಮಶಾನದಲ್ಲಿನ ಉದ್ಯಾನಕ್ಕೆ ವಾಯುವಿಹಾರಕ್ಕೆ ಹಾಗೂ ವಿಶೇಷ ದಿನಗಳಂದು ಶಿವನ ದರ್ಶನಕ್ಕೆ ಮಕ್ಕಳು, ಮಹಿಳೆಯರು ಕುಟುಂಬ ಸಹಿತ ಆಗಮಿಸುತ್ತಾರೆ. ಈ ಸಲದ ಶಿವರಾತ್ರಿಯಂದು ಜಾಗರಣೆಯಲ್ಲಿ ಮಹಿಳಾ ಮಂಡಳಿಗಳಿಂದ ವಿಶೇಷ ಭಜನಾ ಕಾರ್ಯಕ್ರಮವಿರಲಿದೆ. ಅಭಿಷೇಕ, ಮಹಾಪೂಜೆ, ಆರತಿ ಹಾಗೂ ಸಾಬುದಾನಿ ಖಿಚಡಿ ಮತ್ತು ಹಣ್ಣಿನ ಸಲಾಡ್ ಪ್ರಸಾದ ವಿತರಿಸಲಿದ್ದಾರೆ.
ಮಂಡಳಿ ಮಾಡಿರುವ ಕಾರ್ಯಗಳು
ಸ್ಮಶಾನದಲ್ಲಿ ಉಚಿತ ಸಾಮೂಹಿಕ ವಿವಾಹ
ಸ್ವಂತ ಖರ್ಚಿನಲ್ಲಿ ಬಡ ಕುಟುಂಬದ ಮೃತರ ಅಂತ್ಯಕ್ರಿಯೆ
ಅಂತ್ಯಕ್ರಿಯೆಗೆ ಬೇಕಾದ ಕಟ್ಟಿಗೆ ಕಡಿಮೆ ದರದಲ್ಲಿ ಒದಗಿಸುವುದು
ಪ್ರತಿ ವರ್ಷ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ವಿತರಣೆ
ದಾನಿಗಳ ಸಹಾಯದಿಂದ ನೀರು, ಶೌಚಗೃಹ ಮತ್ತು ಪೇವರ ಬ್ಲಾಕ್ಗಳ ಅಳವಡಿಕೆ
ಶ್ರಾವಣ ಮಾಸದಲ್ಲಿ ವಿಶೇಷ ಆರಾಧನೆ
Laxmi News 24×7