ಚಿಕ್ಕೋಡಿ: “ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಚಿವ ಕೆ.ಎನ್.ರಾಜಣ್ಣ ಭೇಟಿ ಆಗಿರುವುದಲ್ಲಿ ತಪ್ಪೇನು? ಅವರು ಪಕ್ಷದ ಅಧ್ಯಕ್ಷರು, ಇವರು ಪಕ್ಷದ ಶಾಸಕರು” ಎಂದು ಶಾಸಕ ಲಕ್ಷ್ಮಣ್ ಸವದಿ ಪ್ರತಿಕ್ರಿಯಿಸಿದ್ದಾರೆ.
ಅಥಣಿ ಪಟ್ಟಣದ ಸಮುದಾಯದ ಆಸ್ಪತ್ರೆಯಲ್ಲಿ ಇಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ಹಾಗೂ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ಆರಂಭಗೊಂಡ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
ಒಂದೇ ಪಕ್ಷದಲ್ಲಿ ಇರುವುದರಿಂದ ಭೇಟಿ ಮಾಡಿ ಚರ್ಚೆ ನಡೆಸಬೇಕಾಗುತ್ತದೆ. ಟೀಕೆ, ಟಿಪ್ಪಣಿ ಸಹಜವಾಗಿ ಬರುತ್ತದೆ. ಅಧ್ಯಕ್ಷರನ್ನು ಶಾಸಕರು ಭೇಟಿ ಆಗುವುದೇ ದೊಡ್ಡ ಸುದ್ದಿ ಆಗುತ್ತದೆ. ಡಿ.ಕೆ. ಅವರನ್ನು ರಾಜಣ್ಣ ವಿರೋಧ ಮಾಡುತಿದ್ದರು ಎಂಬುದು ನಿಮ್ಮ ಮಾತು. ಆದರೆ ರಾಜಕಾರಣದಲ್ಲಿ ಶಾಶ್ವತ ವೈರಿನೂ ಇರುವುದಿಲ್ಲ, ಶಾಶ್ವತ ಮಿತ್ರರೂ ಇರುವುದಿಲ್ಲ. ಕಾಲಾಯ ತಸ್ಮೈ ನಮಃ. ಕಾಲದ ಅನುಸಾರ ಅವೆಲ್ಲವೂ ನಡೆದುಕೊಂಡು ಹೋಗುತ್ತವೆ” ಎಂದು ಸವದಿ ಹೇಳಿದರು.
“ಈ ಸಲ ಅಪೆಕ್ಸ್ ಬ್ಯಾಂಕಿನ ಸ್ಥಾನಕ್ಕೆ ನಾನು ಅಪೇಕ್ಷೆಪಟ್ಟಿಲ್ಲ. ಈಗಾಗಲೇ ಸಂಬಂಧಪಟ್ಟವರಿಗೆ ನಾನು ಈ ಬಗ್ಗೆ ತಿಳಿಸಿದ್ದೇನೆ. ಇದರಲ್ಲಿ ಸಂಶಯ ಬೇಡ” ಎಂದು ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದರು.
ಇದೇ ವೇಳೆ, “ಮಲ್ಲಿಗೆ ಹೂವಿನ ವಾಸನೆ ಬೇರೆ ಯಾವುದೇ ಗಿಡದಿಂದ ಬರುವುದಕ್ಕೆ ಸಾಧ್ಯವಿಲ್ಲ. ಮಲ್ಲಿಗೆ ಹೂವಿನ ವಾಸನೆ ಶಾಶ್ವತವಾಗಿರುತ್ತದೆ. ಆ ವಾಸನೆ ಕಡಿಮೆ ಮಾಡಿಸಲು ನಿಸರ್ಗಕ್ಕೂ ಸಾಧ್ಯವಾಗುವುದಿಲ್ಲ. ಹೀಗಾಗಿ ಸಹಕಾರಿ ಕ್ಷೇತ್ರದಲ್ಲಿ ನನ್ನ ಕುಗ್ಗಿಸುವ ಕಾರ್ಯ ನಡೆಯುವುದಿಲ್ಲ” ಎಂದು ಪರೋಕ್ಷವಾಗಿ ರಾಜಕೀಯ ಎದುರಾಳಿಗಳಿಗೆ ಟಾಂಗ್ ನೀಡಿದರು.
ಮುಂದುವರೆದು, “ಅಥಣಿ ಪುರಸಭೆಯಿಂದ ನಗರಸಭೆಗೆ ಬಡ್ತಿ ಪಡೆದಿದ್ದು ಸಂತಸದ ಸಂಗತಿ. ಈ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು. ಅಥಣಿ ಮತಕ್ಷೇತ್ರದ ಪ್ರವಾಹಪೀಡಿತರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಕೆಲವು ಅಡಚಣೆಗಳು ಉಂಟಾಗಿದ್ದು ಅವುಗಳನ್ನು ಶೀಘ್ರವೇ ಬಗೆಹರಿಸಲಾಗುವುದು” ಎಂದರು.
ಅಥಣಿ ಸಮುದಾಯದ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ವೈದ್ಯರು ಎರಡು ಮೂರು ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಡುತ್ತಿರುವ ಆರೋಪ ವಿಚಾರವಾಗಿ ಮಾತನಾಡಿ, “ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಆ ರೀತಿ ಏನಾದರೂ ಆಗುತ್ತಿದ್ದರೆ, ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಸಚಿವರಿಗೆ ತಿಳಿಸುತ್ತೇನೆ. ನನ್ನ ಹೆಸರಿಗೆ ಈ ಕಪ್ಪು ಚುಕ್ಕೆ ತರೋಕೆ ಸಾಧ್ಯವಿಲ್ಲ. ಅದು ಯಾರಿಂದಲೂ ಕೂಡ ಸಾಧ್ಯವಾಗುವುದಿಲ್ಲ. ಜನರಿಗೆ ನಾನೇನು ಎಂಬುದು ಗೊತ್ತಿದೆ ಇದರಿಂದ. ಇಂಥ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇನೆ” ಎಂದು ಹೇಳಿದರು.
Laxmi News 24×7